Saturday 26 October 2013

ಕೊಡಗಿನ ಗೌರಮ್ಮ ಸ್ಮಾರಕ ಅಖಿಲ ಭಾರತ ಹವ್ಯಕ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ನನ್ನ ಕಥೆ ಹೊಂಗಿರಣ



                                                ಹೊಂಗಿರಣ
ಗಂಟೆ ನೋಡಿದೆ, ಹೊತ್ತಪ್ಪಗ ಅರೂವರೆ ತೋರುಸುತ್ತಾ ಇತ್ತು ವಾಚು “.ಇನ್ನೊಳುದೋರ ನಾಳೆ ಬಪ್ಪಲೆ ಹೇಳು “ ಹೇಳಿ ಹೇಳಿದೆ .ಹೆರ ಹೋಗಿ ಒಳ ಬಂದ ಪ್ಯೂನ್  ರಾಮ ಲಿಂಗ “ಮೇಡಂ ಇನ್ನು ಒಬ್ಬ ಮಾತ್ರ ಒಳುದ್ದ ,ಒಳ ಕಳುಸಕ್ಕ ,ನಾಳೆ ಬಪ್ಪಲೆ ಹೇಳಕ್ಕ ?ಹೇಳಿ ಕೇಳಿದ .ದೊಡ್ಡಕ್ಕೆ ಉಸುರೆಳದು ಆ ಕಡೆ ಈ ಕಡೆ ನೋಡಿದೆ .ಆಫೀಸು ಇಡೀ ಪ್ರಶಾಂತ ವಾಗಿದ್ದು .ಬಹುಶ ಕೆಲಸಗಾರರೆಲ್ಲ ಮನೆಗೆ ಹೋಗಿರೆಕ್ಕು ,ಅವರ ಸಮಯ ಕಳುದ್ದು . ಮ್ಯಾನೇಜರ್ ಆಗಿದ್ದ  ಅಚ್ಯುತನ್ ಇದ್ದಕಿದ್ದ ಹಾಂಗೆ ರಾಜೀನಾಮೆ ಕೊಟ್ಟು ಎಂಗಳ ಕಂಪನಿಗೆ ದಾಯಾದಿಗಳ ಹಾಂಗೆ   ಹೊಣಕ್ಕೊಂಡು ಇಪ್ಪ ಸಮಯ ಸಾಫ್ಟ್ ವೇರಿಂಗೆ ಸೇರಿದ ಕಾರಣ ಅವನ ಸ್ಥಾನಕ್ಕೆ ಯೋಗ್ಯರ ಆಯ್ಕೆ ಮಾಡಿ ತೆಕ್ಕೊಮ್ಬದು ಅನಿವಾರ್ಯ ಆತು . ಈ ಸರ್ತಿ ಸಣ್ಣ ಪ್ರಾಯದ  ಚುರುಕಿನ ಮಾಣಿ ಅಥವಾ ಕೂಸಿನ ಅಆಯ್ಕೆ ಮಾಡುದು ಹೇಳಿ ನಿರ್ಧಾರ ಮಾಡಿ ಅರ್ಜಿ ದೆನಿಗೇಳಿತ್ತಿದೆಯ .ಸಾಪ್ ಟ್ರೈನಿಂಗ್ ಕಂಪನಿಗೊಕ್ಕೆ ಸಾಫ್ಟ್  ಮೇಟಿರಿಯಲ್  ಸಪ್ಪ್ಲೈ  ಮಾಡುವ ಎಂಗಳ “ದಯಾ ಸಾಫ್ಟ್ವೇರ್ ಸೊಲ್ಯುಶನ್  ಲಿಮಿಟೆಡ್”  ಕಂಪನಿಗೆ ಸಾಕಷ್ಟು ಒಳ್ಳೆ ಹೆಸರಿದ್ದು .ಹಾಂಗಾಗಿ ಸುಮಾರು ೫೦೦ ಜನಾಂಗ ಅರ್ಜಿ ಹಾಕಿದ್ದವು .ಅದರಲ್ಲಿ ಯೋಗ್ಯ ಅನ್ನಿಸಿದ ೫೦ ಜನನ್ಗೊಕ್ಕೆ  ಲಿಖಿತ ಪರೀಕ್ಷೆ ಕೊಟ್ಟು ಅದರಲ್ಲಿ ಒಳ್ಳೆದು ಬರದ ೧೫ ಜನರ ಇಂಟರ್ವ್ಯೂ  ಗೆ ಬಪ್ಪಲೆ ಹೇಳಿತ್ತಿದೆಯ.
ಉದಿಯಪ್ಪಗಂದ ಇಂಟರ್ವ್ಯೂ ಮಾಡಿ ಮಾಡಿ ಸಾಕಾಗಿ ಹೋಗಿತ್ತು ,ಹೆಂಗೋ ಇನ್ನೊಬ್ಬ ಮಾತ್ರ ಅನ್ನೆ ,ಅವಂದೂ ಮುಗಿಸಿ ಬಿಡುವ ಹೇಳಿ ಅವನ ಒಳ ಬಪ್ಪಲೆ ಹೇಳಿದೆ.ಎಲ್ಲರ  ಹಾಂಗೆ ಅವ (!) ಕೂಡಾ ವಿಶ್ ಮಾಡಿ ಕೂದ .ಅವನ ಸರ್ಟಿಫಿಕೆಟ್ ಗಳ ಎಲ್ಲ ನೋಡಿದೆ ಎಲ್ಲ ಸರಿಯಾಗಿಯೇ ಇತ್ತು ಎಸ್ ಎಸ್ ಎಲ್ ಸಿ ಇಂದ ಹಿಡುದು  ಎಂಜಿನೀರಿಂಗ್ ತನಕ ಎಲ್ಲ ಹಂತನ್ಗಳಲ್ಲಿಯೂ   ರೇನ್ಕು ತೆಗದ್ದ ,ತೊಂದರೆ ಇಲ್ಲೇ ಮಾಣಿ ,ಬುದ್ದ್ಧಿವಂತ ಹೇಳಿ ಅನ್ಸಿತ್ತು .ಅವಂಗೆ ಸುಮಾರು ೨೬ -೨೭ ವರ್ಷ ಆದಿಕ್ಕು ಮೋರೆಲಿ ಕಂಡೂ ಕಾಣದ್ದ ಹಾಂಗೆ ಇಪ್ಪ ತೆಳು ಸಣ್ಣ ಮೀಸೆ ,ಉರುಟು ಮೋರೆ ಸಣ್ಣ ಸಣ್ಣ ಬೇಲಿ ಹಲ್ಲುಗ ಒಳ್ಳೆ ಚೆಂದದ  ಮಾಣಿ ! ಕಣ್ಣಿಂಗೆ ಹಾಕಿದ ಕನ್ನಡಕದೆಡೆಲಿ ಕಣ್ಣಿನ ಭಾವನೆಗೆಲ್ಲ್ಲ  ಹುಗ್ಗಿ ಕೂಯ್ದವು ,ಕಪ್ಪು ಪ್ಯಾಂಟು ,ಬೂದಿ ಬಣ್ಣದ ಫುಲ್ ಕೈ ಅಂಗಿ ಮೇಲೆ ಒಂದು ಕೋಟು ಟೈ ಕಟ್ಟಿ ಕೂದ ಪೋಸು ಎಂತಕೋ ಕೂಸಿನ ಹಾಂಗೆ ಕಾಣುತ್ತಾ ಇತ್ತು. ರಜ್ಜ ಉಬ್ಬಿದ ಎದೆ  ತೊಡೆಗ ಅವಂಗೆ ರಜ್ಜ ಕೂಸುಗಳ ಲುಕ್  ಕೊಟ್ಟಿತ್ತಿದವು .ಇನ್ನೊಂದರಿ ಅವನ ಅಪ್ಲಿಕೇಶನ್ ನೋಡಿದೆ .ಹೆಸರು ಕಿರಣ್  ,ಅಪ್ಪನ ಹೆಸರಿನ ಮುಂದೆ  ಎಂತ ಬರದ್ದಾ ಇಲ್ಲೆ .ಅಬ್ಬೆ ಹೆಸರು ವೆಂಕಟ ಲಕ್ಷ್ಮಮ್ಮ ಹೇಳಿ ಇತ್ತು. ಕೂಸ ಮಾಣಿಯಾ ಹೇಳಿಯೂ ಬರದ್ದಾ ಇಲ್ಲೆ  .ಹಾಂಗಾಗಿ ಮೊದಲಿನ್ಗೆ ಅಬ್ಬೆ ಅಪ್ಪನ ಬಗ್ಗೆ ಕೇಳಿದೆ .ಅಂಬಗ ಅವ ಹೇಳಿದ್ದಿಷ್ಟು !ಆವ ಒಬ್ಬ ಅನಾಥ ಮಾಣಿ ಅಡ ,ಯಾರೋ ತಂದು ಊರಿನ ಗೋಳಿಮರದ ಹತ್ತರೆ ಬಿಟ್ಟು ಹೋದ ಎರಡು  ತಿಂಗಳ ಹಿಳ್ಳೆಯ ಮಕ್ಕ ಇಲ್ಲದ್ದ ಗೆಂಡ ಸತ್ತ ಹೆಮ್ಮಕ್ಕ ವೆಂಕಟ ಲಕ್ಷ್ಮಮ್ಮ ಕರುಣೆಲಿ ಹೆರ್ಕಿ ತಂದು ಪ್ರೀತಿಲಿ  ಸಾಂಕಿ ದೊಡ್ಡ ಮಾಡಿದ್ದಡ.ಬಡಪ್ಪತ್ತು ಇದ್ದರೂ ಕೂಡ ಆರಾರಿಂದ ಸಹಾಯ ಪಡದು ಸ್ಕಾಲರ್ಷಿಪ್ ಪಡದು ಎಂಜಿನೀರಿಂಗ್ ಓದಿ ನಂತರ ಎಂ ಬಿ ಎ ಮಾಡಿದ್ದ .ಅದು ಸರಿ ಲಿಂಗ ಸೂಚಿ ಕಾಲಂ ಎಂತಕೆ ಕಾಲಿ ಬಿಟ್ಟದು.ನೀನು ಮಾಣಿಯಾ ಕೂಸ ಹೇಳಿ ಹೇಂಗೆ ಗೊಂತಾಯಕ್ಕು ಎನ್ಗೊಗೆ “ಹೇಳಿ ಕೇಳಿದೆ ,ಕೇಳಿದ್ದೇ ತಡ !!ಆವ ದಡಕ್ಕನೆ ಎದ್ದು ನಿಂದು ಎನ್ನ ಕೈಲಿದ್ದ ಅವನ ಒರಿಜಿನಲ್ಸ್ ಇದ್ದ ಫೈಲಿನ ಎಳದು ತೆಕ್ಕೊಂಡು “ಥೂ ಎಲ್ಲಿ ಹೋದರೂ ಇದೇ  ಪ್ರಶ್ನೆ .ಗಂಡೋ ಹೆಣ್ಣೋ  ಹೇಳಿ ಎಂತದಕ್ಕೆ ಬೇಕು ?ಮನುಷ್ಯ ಆಗಿದ್ದರೆ ಸಾಲದ ?ಗಂಡು ಹೆಣ್ಣು ಸಮಾನ ಹೇಳಿ ಬೊಬ್ಬೆ ಹಾಕುವ ನಿನ್ಗಳನ್ತೋರಿಂದಲೂ ಇದೇ ಪ್ರಶ್ನೆ !ನಿಂಗಳ ಪ್ರಶ್ನೆಗೆ ಎನ್ನ ಉತ್ತರ ಇಷ್ಟೇ ಆನೊಬ್ಬ ಮನುಷ್ಯತ್ವ ಇಪ್ಪ ಪ್ರಾಮಾಣಿಕ ಮನುಷ್ಯ .ಇದರಂದ ಹೆಚ್ಚು ಕೇಳ್ತರೆ ನಿಂಗಳ ಕೆಲಸವೂ ಬೇಡ ....ಎಂತದೂ ಬೇಡ ! ನಮಸ್ಕಾರ “ಹೇಳಿದವ ಸೀದಾ ಎದ್ದು ಹೆರ ಹೋದ.!! ಅವನ ಅರ್ಜಿಲಿ ಇದ್ದ ಫೋಟೋ ಎನ್ನ ನೋಡಿ ನೆಗೆ ಮಾಡ್ತಾ ಇತ್ತು.ಮಾಣಿಯಾ ಕೂಸ ಹೇಳಿ ಕೇಳಿದ್ದರಲ್ಲಿ ತಪ್ಪೆಂತ ಇದ್ದು ?! ಎನಗಂತೂ ಅರ್ಥ ಆಯಿದಿಲ್ಲೆ .ಆದರೂ ಅವನ (?!)ಕೋಪಂದ  ಕೆಂಪಾದ ಮೊರೆಯ ಕೆಂಪಡರಿದ ಕಣ್ಣುಗ ಮಾತ್ರ ನೀರು ತುಂಬಿ ಅವ್ಯಕ್ತ ದುಃಖದ  ಹೇಳುತ್ತಾ ಇದ್ದವು ಹೇಳಿ ಎನ್ಸಿತ್ತೆನಗೆ .
   ಎಂತಕ್ಕೋ ಏನೋ ಮನೆಗೆ ಹೋದ ಮೇಲೂ ಅವನ ಮೋರೆಯೇ ಕಣ್ಣಿಂಗೆ ಕಟ್ಟುತ್ತಾ ಇತ್ತು .ಅವನ ನಡೆ ನುಡಿ ನೋಡುವಗ  ಆವ  ಹಾನ್ಕಾರಿ ಹೇಳಿ ಆಗಲೀ, ಕೋಪಿಷ್ಠ ಹೇಳಿ ಆಗಲೀ ಎನಗೆ ಅನ್ಸಿದ್ದಿಲ್ಲೆ .ಆದರೂ ಅವನ ಆ ಕೋಪ ಆಕ್ರೋಶ ಎಂತಕೆ ,ಆನು ಕೇಳಿದ್ದದರಲ್ಲಿ ಅಷ್ಟು ಬೇಜಾರಪ್ಪದು ಎಂತ ಇದ್ದು ?! ಮನೇಲೂ ಏನೋ ಆಲೋಚಿಸುತ್ತ ಇಪ್ಪ ಎನ್ನ ಅನ್ಯ ಮನಸ್ಕತೆಯ ಗಮನಿಸಿದ  ಇವು  “ಏನು ಮೇಡಂ ?ಭಾರೀ ಯೋಚನೆ ಮಾಡ್ತಾ ಇದ್ದಿ ?!ಹೇಳಿ ಚುಡಾಯಿಸಿದಪ್ಪಗ “ಸುಮ್ಮನೆ ಇರಿ ..ನಿಂಗೊಗೆ ಎಲ್ಲ ತಮಾಷೆ ..”ಹೇಳಿ ನಂತರ ಆನು ಇಂಟರ್ವ್ಯೂ ಮಾಡಿದ ಆ ಮಾಣಿಯ ವಿಚಿತ್ರ ನಡೆಯ ಬಗ್ಗೆ ಹೇಳಿದೆ .“ಈಗಣ ಮಾಣಿಯನ್ಗಳೇ ಹಾಂಗೆ ಮಾರಾಯ್ತಿ . ಕ್ಷಣ ಚಿತ್ತ ಕ್ಷಣ ಪಿತ್ತ....ಅದಕ್ಕೆ ಇಷ್ಟು ತಲೆ ಕೆಡಿಸಿಕೊಮ್ಬಲೇ ಎಂತ ಇದ್ದು ?ಹೇಳಿ ಇವು ಹೇಳಿಯಪ್ಪಗ ಅಲ್ಲಿಯೇ ಇದ್ದ ಎಂಗಳ ಎಂ ಬಿ ಎ ಓದ್ತಾ ಇಪ್ಪ ಎಂಗಳ ಮಗ ಅಖಿಲ್ ಬಾಯಿ ಹಾಕಿ “ಅಮ್ಮಾ ಅವ ದ್ವಿಲಿಂಗಿ ಆದಿಕ್ಕಾ  ಏನ?ಇಲ್ಲೇ ಹೇಳಿ ಆದರೆ ಅವ ಎಂತಕೆ ಗಂಡು /ಹೆಣ್ಣು ಕಾಲಂ ತುಂಬಿದ್ದಾ ಇಲ್ಲೆ ?!ಎಲ್ಲ ಕಡೆ ಇದೇ ಕಾರಣಕ್ಕೆ ಅವಂಗೆ ಕೆಲಸ ಸಿಕ್ಕಿರ .ಅವನ ಹೆಣ್ಣ ಗೆಂಡ ಹೇಳಿ ಕೇಳಿ ಕೆಣಕಿ ಕೆಣಕಿ ಅವಂಗೆ ಅವಮಾನ ಮಾಡಿಕ್ಕು .ಅದಕ್ಕೆ ಅವಂಗೆ ಅಷ್ಟು ಕೋಪ ಬಂದದು ಆದಿಕ್ಕು.”ಹೇಳಿ ಹೇಳಿದ !ಆದಿಪ್ಪಲೂ ಸಾಕು ಹೇಳಿ ಅನ್ಸಿತ್ತು .ಅದು ನಿಜ ಆಗಿದ್ದರೆ ಅವನ ಪರಿಸ್ಥಿತಿಯ ಜ್ಹಾನ್ಸಿ ಗೊಂಡು ಅನುಕಂಪ ಆತು.ಪಾಪ ಹೇಳಿ ಅನ್ಸಿತ್ತು.ಏನೇ ಆದರೂ ಅವನ ಬಗ್ಗೆ ಸರಿಯಾಗಿ ತಿಳಿಯಕ್ಕು,ನಾಳೆ ಅವನ ಮನೆಗೆ  ಸ್ವತಃ ಹೋಗಿ ಬಪ್ಪದು ‘ಹೇಳಿ ನಿರ್ಧಾರ ಮಾಡಿದೆ .ಮನಸ್ಸಿಂಗೆ ರಜ್ಜ ಸಮಾಧಾನ ಆತು .
    ಉದಿಯಪ್ಪಗ ಯಾವಗಣಂದ ಬೇಗ ಹೇರಟಪ್ಪಗ “ಎಂತ ಡಿ ಎಂ ಸಾಹೇಬ್ರು ಬೇಗ ಹೆರಟದು ?ಆರ ಉದ್ದಾರ ಮಾಡುವ ಆಲೋಚನೆಲಿ ಇದ್ದಿ ?ಹೇಳಿ ನಾಟಕೀಯ ಶೈಲಿಲಿ ಇವು ಕೇಳಿಯಪ್ಪಗ “ನಿನ್ಗಳೂ ಬನ್ನಿ ಒಟ್ಟಿನ್ಗೆ”ಹೇಳಿ ತಮಾಷೆಲಿ ದೆನಿಗೇಳಿದೆ.” .ಅಯ್ಯಯ್ಯೋ  ..ಬೇಡಪ್ಪ ಎನಗೆ ತುಂಬಾ ಕೆಲಸ ಇದ್ದು ,ನೀನೇ ಹೋಗಿ ಬಾ “ಹೇಳಿ ಇವು ಹೇಳಿ ಅಪ್ಪಗ ಡ್ರೈವರಿಂಗೆ ಆ ಮಾಣಿಯ ಅಡ್ರೆಸ್ ಕೊಟ್ಟು ಅಲ್ಲಿಗೆ ಹೋಪಲೆ ಹೇಳಿ ಕಾರು ಹತ್ತಿ ಕೂದೆ .ಕಾರು ಮುಂದೆ  ಹೋದ ಹಾಂಗೆ ನೆನಪಿನ ಚಿತ್ರಂಗಳ ಸುರುಳಿ ಬಿಡಿಸಿಕೊಂಡತ್ತು .
   ಮಧ್ಯಮ ವರ್ಗದ ಅಡಕೆ ಕೃಷಿಗಾರರಾದ ಎಂಗಳ ಅಬ್ಬೆ ಅಪ್ಪಂಗೆ ಎಂಗ ೫ ಜನ ಮಕ್ಕ .ಇಬ್ರು ಕೂಸುಗಳ ನಂತರ ಹುಟ್ಟಿದ ಮೂರನೇ ಮಗಳು ಆನು .ಎನ್ನ ನಂತರ ಒಂದು ತಂಗೆ ,ಒಡ್ಕಕ್ಕೆ ತಮ್ಮ ಹುಟ್ಟಿದ್ದು .ಆರಕ್ಕೇರದ ಮೂರಕ್ಕಿಳಿಯದ ಸಂಸಾರ ಎನ್ಗಳದ್ದು .ಅಬ್ಬೆ ಅಪ್ಪನಲಿದ್ದ ಸಂಸ್ಕಾರಂದಾಗಿ ಎಂಗ ಎಲ್ಲರೂ ಸುಸಂಸ್ಕೃತರೇ ಅಗಿತ್ತಿದೆಯ.ಅಪ್ಪ ಹೇಳಿದ್ದಕ್ಕೆ ವಿರೋಧ ಹೇಳುವ ಪ್ರಶ್ನೆಯೇ ಎಂಗಳಲ್ಲಿ ಇತ್ತಿಲ್ಲೆ .ದೊಡ್ದಕ್ಕಂಗೆ ಎಸ್ ಎಸ್ ಎಲ್ ಸಿ ಆವುತ್ತಾ ಇದ್ದಾಂಗೆ ಮಾಣಿ ನೋಡಿ ಮದುವೆ ಮಾಡಿದವು .ಆನು ಅಂಬಗ ಏಳನೇ ಕ್ಲಾಸಿಲಿ ಓದುತ್ತಾ ಇತ್ತಿದೆ .”ಅಕ್ಕ ಮದುವೆ ಆಗಿ ಬಾವನೊಟ್ಟಿನ್ಗೆ ಹೋಪಗ ಕೂಗುತ್ತಿದ್ದದು ಎಂಗಳ ಎಲ್ಲ ಬಿಟ್ಟು ಹೋಪ ದುಃಖಲ್ಲಿಯಾ ಅಥವಾ ಮುಂಡೆ ಓದುಲಾಯಿದಿಲ್ಲೆ ಹೇಳಿಯ ಹೇಳಿ ಎನಗೆ ಅರ್ಥ ಆಯಿದಿಲ್ಲೆ .ಎಲ್ಲೊರು ಎಂಗಳ ಎಲ್ಲ ಬಿಟ್ಟು ಹೋಪ ದುಃಖಲ್ಲಿ ಕೂಗುದು ಹೇಳಿ ಜ್ಹಾನ್ಸಿದರೆ ಎನ್ನ ಮನಸ್ಸು ಮಾತ್ರ ಅದರ ಒಪ್ಪಿತ್ತಿಲ್ಲೆ.ದೊಡ್ದಕ್ಕಂಗೆ ಮಾಡುವೆ ಆದ ಮೇಲೆ ಎನಗೆ ನಿಜವಾಗಿಯೂ ತುಂಬಾ ದುಃಖ ಆತು ಎಂತಕೆ ಹೇಳುರೆ ಎನಗೆ ಮೊದಲು ಪೂರ್ತಿ ಸ್ವಾತಂತ್ರ್ಯ ಇತ್ತು .ಯಾವುದೊಂದೂ ಮನೆ ಕೆಲಸ ಮಾಡಕ್ಕಾಗಿತ್ತಿಲ್ಲೆ.ಆನು ಶಾಲೆಗೇ ಹೋಗಿ ಬಂದು ಇಡೀ ದಿನ ಸಾಯಿಸುತೆ, ಉಷಾ ನವರತ್ನ ರಾಮ್,ಎಂ ಕೆ ಇಂದಿರಾ ,ರಾಧಾ ದೇವಿ ,ನಿರಂಜನ ಮೊದಲಾದೋರ ಕಾದಂಬರಿ ಕಥೆ ಓದಿಗೊಂದು ಗಮ್ಮತ್ತು ಮಾಡಿಗೊಂಡು ಇತ್ತ್ತಿದೆ .ಮನೆ ಕೆಲಸವ ಎಲ್ಲ ದೊಡ್ದಕ್ಕಂದೆ ಸಣ್ಣಕ್ಕಂದೆ  ಅಮ್ಮನೊಟ್ಟಿನ್ಗೆ ಸೇರಿ ಮಾಡ್ತಾ ಇತ್ತಿದವು .ಉಂಡ ಬಟ್ಲು ಕೂಡ ತೊಳದು ಎನಗೆ ಅಭ್ಯಾಸ ಇತ್ತಿಲ್ಲೆ .ಈಗ ದೊಡ್ದಕ್ಕಂಗೆ ಮದುವೆ ಅಪ್ಪದ್ದದ್ದೆ ಆನೂ ಸಣ್ಣಕ್ಕನೊಟ್ಟಿನ್ಗೆ ಸೇರಿ ಪಾತ್ರ ತೊಳವದು ಉಡುಗುದು ,ಉದ್ದುದು ಮಾಡಕ್ಕಾಗಿ ಬಂತು !ಹಾಂಗಾಗಿ ಕಾದಂಬರಿ ಕಥೆ ಓದುಲೇ ಸಮಯ ಸಿಕ್ಕುತ್ತಿಲ್ಲೆ ಹೇಳಿ ಎನಗೆ ದುಃಖ ಆಗಿತ್ತು  !
     ಆನು ಹತ್ತನೇ ಕ್ಲಾಸಿನ್ಗೆ ಕಾಲು ಮಡುಗಿಯಪ್ಪಗ ಎರಡನೇ ಅಕ್ಕಂಗು ಮದುವೆ ನಿಶ್ಚಯ ಆತು .ಅದು ಅಂಬಗ ಪಿ ಯು ಸಿ ಓದುತ್ತಿತ್ತು.ಅದು ಕಲಿವದರಲ್ಲಿ ತುಂಬಾ ಉಷಾರಿ ಕೂಸು ಅದಕ್ಕೆ ಎಂಜಿನೀರಿಂಗ್ ಓದಕ್ಕು ಹೇಳಿ ತುಂಬಾ ಆಸೆ ಇತ್ತು .ಆದರೆ ಅದರ ಓದುಸುವಷ್ಟು ಪೈಸೆ ಮತ್ತೆ ಧೈರ್ಯ  ಅಪ್ಪಂಗೆ ಇತ್ತಿಲ್ಲೆ .ಬೆನ್ನಿಂಗೆ ಇಬ್ರು ಕೂಸುಗ ಇದ್ದವು ಇದರ ಮದುವೆ ಮುಂದೆ  ಹಾಕಿಯರೆ ಎಲ್ಲರದ್ದೂ ಮುಂದೆ  ಹೊವುತ್ತು !ಅಲ್ಲದ್ದೆ ಹೆಚ್ಚು ಓದ್ಸಿದರೆ ಓದಿದ ಮಾಣಿ ಹುಡುಕುಲೇ ಬಂಗ ಹೇಳಿ ಚಿಂತೆ  !ಜೆನಂಗ ಎಂತ ಹೇಳವು ಹೇಳುವ ಅಳುಕು ! ಅಂತೂ ಎರಡನೇ ಅಕ್ಕ್ಕನ ಬದ್ಧವೂ ಕಳುತ್ತು !ಪ್ರತಿಭಟಿಸುವ ಧೈರ್ಯ ಇಲ್ಲದ್ದೆ ಅದು ಸುಮ್ಮನೆ ಇತ್ತು .ಆದರೆ ಎನ್ನತ್ತಾರೆ ಮಾತ್ರ ಗುಟ್ಟಿಲಿ ಬಂದು “ವಿಜ್ಜಿ ನೀನು ಮಾತ್ರ ಬೇಗ ಮದುವೆ ಅಪ್ಪಲೇ ಒಪ್ಪಡ .ಎಂಜಿನೀರಿಂಗ್ ಓದಿ ಕೆಲಸಕ್ಕೆ ಸೇರಿದ ಮೇಲೆಯೇ ಮಾಡುವೆ ಆಗು ಹೇಳಿ ಎನಗೆ ಹೇಳಿ ಕೊಟ್ಟತ್ತು .ಕಣ್ಣು ಮುಚ್ಚಿ ತೆಗವಷ್ಟರಲ್ಲಿ ಎರಡನೇ ಅಕ್ಕ ಕೂಡ ಮಾಡುವೆ ಆಗಿ ಭಾವನ ಮನೆಗೆ ಹೋಗಿ ಸೇರಿತ್ತು
 ಆನು ಪಿ ಯು ಸಿ ಓದುತ್ತಾ ಇಪ್ಪಗ ಎನಗೂ ಮಾಣಿ ನೋಡುಲೆ ಸುರು ಮಾಡಿದವು.ಅಂಬಗ ಸಣ್ಣಕ್ಕ ಹೇಳಿ ಕೊಟ್ಟ ಹಾಂಗೆ ಆನು “ಎನಗೆ ಎಂಜಿನೀರಿಂಗ್ ಓದಕ್ಕು “ಹೇಳಿ ಹಠ ಹಿಡುದೆ!ಎನ್ನ ಉಪವಾಸ ಸತ್ಯಾಗ್ರಹಕ್ಕೆ ಮನಕರಗಿದ ಅಪ್ಪ ಮುಂದೆ ಓದುಸುಲೆ ತಯಾರಿಪ್ಪ ಮಾಣಿಯ ಹುಡುಕುಲೆ ಸುರು ಮಾಡಿದವು.ಅಂತೂ ಇಂತೂ ಒಡ್ಕಕ್ಕೆ ಒಬ್ಬ ಮುಂದೆ ಓದುಸುಲೇ ತಯಾರಿಪ್ಪ ಮಾಣಿ ಅಪ್ಪಂಗೆ ಸಿಕ್ಕಿದ !ಅವನೊಟ್ಟಿನ್ಗೆ ಮದುವೆಯೂ ಆತು !ಎನ್ನ ಹಸ್ಬೆಂಡ್ ಏನೋ ಮೊದಲು ಒಪ್ಪಿದಾನ್ಗೆ ಮುಂದೆ ಓದುಸುಲೇ ತಯಾರಿತ್ತಿದವು .ಆದರೆ ಓದುದು ಮಾತ್ರ ಬಾಯಿಲಿ ಹೇಳಿದಷ್ಟು ಸುಲಭ ಇತ್ತಿಲ್ಲೆ .ಇದು ೩೦ -೩೫  ವರ್ಷ ಹಿಂದಣ ವಿಚಾರ .ಅಂಬಗ ಮಾಡುವೆ ಆದ ಮೇಲೆ ನಮ್ಮೋರು ಕೂಸುಗ ಓದುದು ಹೇಳಿದರೆ ಅದೊಂದು ಕ್ರಾಂತಿಯೇ ಸರಿ !ಮನೆಯ ಯಾರ ಸದಸ್ಯರ ವಿರೋಧವ  ಸಮಾಜವ ಎದುರಿಸಿಕೊಂಡು  ಓದುಲೆ ಹೆರಟರೂ ಪೈಸೆಯ ಸಮಸ್ಯೆ .ಅಂತೂ ಇವರ ನಿರಂತರ ಪ್ರೋತ್ಸಾಹಂದ ೫ ವರ್ಷ ಹಾಸ್ಟೆಲ್ ಲಿ ಇದ್ದು ಗೊಂಡು  ಎಂಜಿನೀರಿಂಗ್ ಓದಿದೆ .ಎಂ ಟೆಕ್ ಮಾಡಿದೆ ಕೆಲಸವೂ ಸಿಕ್ಕಿತ್ತು .ಹಲವಾರು ಅಡ್ಡಿ ಅತಂಕಂಗಳ ಎಡೆಲಿಯೂ ಹಂತ ಹಂತವಾಗಿ ಮೇಲೆ ಬತ್ತಾ ಈಗ ಡಿವಿಜನಲ್ ಮ್ಯಾನೆಜೆರ್ ಆಯಿದೆ. ಇನ್ನು ಹತ್ತು ವರ್ಷ ಮಾತ್ರ ಸರ್ವಿಸ್ ಇದ್ದು . ಈಗ ಈ ಎತ್ತರಕ್ಕೆ ಮುಟ್ಟಿದ್ದರೂ ಆನು ಆನು ನಡದು ಬಂದ ದಾರಿಯ ಮರದ್ದಿಲ್ಲೆ .ಆನು ನಡದ ದಾರಿ ಎಂದೂ ಹೂಗಿನ ಹಾಸಿಗೆ ಆಗಿತ್ತಿಲ್ಲೆ ಹಾನ್ಗೇಳಿ  ಅದು ಕಾಲಿ ಕಲ್ಲು ಮುಳ್ಳಿಂದಲೇ ಏನು ತುಮ್ಬಿತ್ತಿಲ್ಲೇ ,ಎರಡರ ಮಿಶ್ರಣ ಆಗಿತ್ತದು .ಹಾಂಗಾಗಿ ಆನು ಕೆಲಸಕ್ಕೆ ಯಾವುದೇ ಅಭ್ಯರ್ಥಿಯ ಆಯ್ಕೆ ಮಾಡುವಗ ಯಾವುದೇ ವಶೀಲಿಗೆ ಬಗ್ಗುತ್ತಿಲ್ಲೆ .ಅಭ್ಯರ್ಥಿಯ ಬದ್ಧಿವಂತಿಕೆ, ಸಾಮರ್ಥ್ಯ  ,ನಡತೆ ಮತ್ತು ಅವರ ಪರಿಸ್ಥಿತಿ ನೋಡಿ ಆಯ್ಕೆ ಮಾಡುತ್ತೆ
   “ಮೇಡಂ ,ಮಾರ್ಗ ಇಲ್ಲಿಗೆ ಮುಗುತ್ತು ,ಬಹುಶ ಇನ್ನು ಒರುಂಕಿಲಿ  ನಡಕ್ಕೊಂಡು  ಹೋಯಕಕ್ಕು” ಹೇಳಿ ಡ್ರೈವರ್ ಹೇಳಿ ಅಪ್ಪಗಳೇ ಈ ಲೋಕಕ್ಕೆ ಆನು ಬಂದದು.”ಸರಿ,ಇಲ್ಲಿ ವೆಂಕಟ ಲಕ್ಷ್ಮಮ್ಮ ನ  ಮನೆ ಎಲ್ಲಿದ್ದು ಹೇಳಿ ತಿಳ್ಕೊಂಡು ಬಾ “ಹೇಳಿ ಅವನ ಕಳುಸಿದೆ .ತೀರಾ ಸಣ್ಣ ಗಲ್ಲಿ ಅದು. ಹರ್ಕಟೆ ಅಂಗಿ ಹಾಕಿದ ಸುಮಾರು ಮಕ್ಕ ಕಾರಿನ ಹತ್ತರೆ ಬಂದು ಮೆಲ್ಲಂಗೆ ಮುಟ್ಟಿ  ನೋಡಿ  ಕೊಶಿ ಪಡುವಗ ‘ಈ ಮಕ್ಕೊಗೆ ಕೊಡ್ಲೇ ಎಂತ ತಾರದ್ದದಕ್ಕೆ ಪೇಚಾಡಿದೆ ಮನಸ್ಸಿಲಿಯೇ.ಹತ್ತು ನಿಮಿಷ ಕಳಿವಷ್ಟರಲ್ಲಿ ಬಂದ ಡ್ರೈವರ್ :ಬನ್ನಿ ಮೇಡಂ ..ಇಲ್ಲ್ಲೇ ಐದು ನಿಮಿಷ ದಾರಿ “ಹೇಳಿ ಹೇಳಿಯಪ್ಪಗ ಅವನ ಹಿನಂದ ಹೋದೆ .ತುಂಬಾ ಸಣ್ಣ ಮುಳಿ ಹುಲ್ಲಿನ ಮನೆ ಅದು .ಅದರೆದುರು ಸುಮಾರು ೬೦-೬೫ ವರ್ಷದ ವೆಂಕಟ ಲಕ್ಷ್ಮಮ್ಮ ನಿಂದಿತ್ತಿದವು .ಡ್ರೈವರ್ ನ ಹೆರ ನಿಮ್ಬಲೇ ಹೇಳಿ ಆನು ಒಳ ಹೋದೆ. ಸುಮನ್ ಹೆರ ಹೊಗಿತ್ತಿದ.ಒಳ್ಳೆದೇ ಆತು ಹೇಳಿ ಸುಮನ್ ಬಗ್ಗೆ ವಿಚಾರಿಸಿದೆ .ಅಪ್ಪು ! ಮಗ ಅಖಿಲನ ಊಹೆ ಸರಿಯಾಗಿತ್ತು !ಸುಮನ್ ಮಾಣಿಯೂ ಅಲ್ಲ ಕೂಸೂ ಅಲ್ಲ !ಹುಟ್ಟಿದ ಶಿಶು  ಮಗು ನಪುಂಸಕ ಎಂದು ಗೊಂತಾಗಿ ಅಪ್ಪಗ ಯಾವುದೋ ನಿಷ್ಕರುಣಿ ಅಬ್ಬೆ ಅಪ್ಪ ಎರಡು ತಿಂಗಳ ಹಿಳ್ಳೆಯ ಇರುಳೋ ಇರುಳು ತಂದು ಗೋಲಿ ಮರದ ಅಡಿಲಿ ಇದುಕ್ಕಿಕ್ಕಿ ಹೊಯಿದವು .ಪಾಪಿಗ !  ವೆಂಕಟ  ಲಕ್ಷ್ಮಮ್ಮನ್ಗೆ ಮನೇಲಿ ಬಡತನ ಇದ್ದರೂ ಹೃದಯ ಶ್ರೀಮಂತಿಕೆ ಧಾರಾಳ ಇತ್ತು .ಹಾಂಗಾಗಿ ಆ ಹಿಳ್ಳೆಯ ತಂದು ಸಾಂಕಿ ದೊಡ್ಡ ಮಾಡಿ ಅವರಿವರ ಕಾಲು ಹಿಡುದು ಪೈಸೆ ಹೊಂದಿಸಿ ಓದಿಸಿದ್ದವು. ಈ ಕಾರಣಕ್ಕೆ ಅವಂಗೆ ಎಲ್ಲಿಯೂ ಕೆಲಸ ಸಿಕ್ಕಿತ್ತಿದಿಲ್ಲೆ .ಕಿರಣ್ ನ ಗಡಸು  ಸ್ವರ ,ಮೀಸೆಯ ಕಾರಣಕ್ಕೆ ಅವನ ಮಾಣಿ ಹೇಳಿ ಹೇಳುಳಡ್ಡಿಯಿಲ್ಲೆ.ಹಾಂಗಾಗಿ ಅವನ್ದೆ ಮಾಣಿಯಂಗಳ ರೀತಿಯೇ ಡ್ರೆಸ್ ಮಾಡಿ ಗೊಂಡಿತ್ತಿದ.  
  ಎಂಗ ಮಾತಾಡುತ್ತ ಇದ್ದ ಹಾಂಗೆ ಕಿರಣ್  ಒಳ ಬಂದ ,ಎನ್ನ ಕಂಡು ಒಂದು ಕ್ಷಣ ಗಲಿ ಬಿಲಿ ಆದರೂ ಸುದಾರಿಸಿಗೊಂಡು ವಿಶ್ ಮಾಡಿದ.ತಲೆ ತಗ್ಗುಸಿ sorry ಮೇಡಂ ಹೇಳಿ ಹಿಂದಣ ದಿನ ಕೋಪಲ್ಲಿ ದಡಕ್ಕನೆ ಎದ್ದು ಬಂದದಕ್ಕೆ  ಕ್ಷಮೆ ಕೇಳಿದ .ಅವನ ವಿನಯ ವಿಧೇಯತೆ, ಪ್ರಸಂಗಾವಧಾನತೆ ತುಂಬಾ ಹಿಡಿಸಿತ್ತು ಎನಗೆ .ಜೊತೆಗೆ ತುಂಬಾ ಬುದ್ಧಿವಂತ ಸಾಮರ್ಥ್ಯವಂತ . ಹಾಂಗಾಗಿ ಅ ಕೆಲಸವ ಅವಂಗೆ ಕೊಡುದು ನಿರ್ಧಾರ ಮಾಡಿ “ನಿನ್ನ ಕೆಲಸಕ್ಕೆ ಆಯ್ಕೆ ಮಾಡಿದ್ದೆ ,ನಿನ್ನ ಮಾಣಿ ಹೇಳಿಯೇ ಎಲ್ಲೋರಿನ್ಗೆ ಪರಿಚಯಿಸುತ್ತೆ .ಈ ರಹಸ್ಯ ಎನ್ನತ್ತರೆಯೇ ಇರ್ತು ಎಂದೂ ಹೆರ ಬತ್ತಿಲ್ಲೆ “ಹೇಳಿ ಮಾತು ಕೊಟ್ಟು ಆರ್ಡರ್ ಬಂದ ಒಂದು ವಾರದ ಒಳ ಬಂದು ಕೆಲಸಕ್ಕೆ ಸೇರುಲೇ ಹೇಳಿ ಅಲ್ಲ್ಲಿಂದ ಹೆರಟೆ .ಅಬ್ಬೆ–ಮಗನ ಸಂಭ್ರಮ ಹೇಳಿ ಪ್ರಯೋಜನ ಇಲ್ಲೆ ! ಅದರ ಪದಂಗಳಲ್ಲಿ ವರ್ಣಿಸುಲೆ ಅಸಾಧ್ಯ !
    ಕಿರಣ್  ಎಂಗಳ ಕಂಪನಿಗೆ ಸೇರಿ ೩- ೪ ವರ್ಷ ಆಯಿಕ್ಕೊಂಡು ಬಂತು. ಒಳ್ಳೆಯ ಪ್ರಾಮಾಣಿಕ ದಕ್ಷ ಕೆಲಸಗಾರ ಅವ ಯಾವುದೇ ವಿಷಯಲ್ಲಿ ಅವನ ಮೇಲೆ ಒಂದೇ ಒಂದು ದೂರು ಹೇಳುವಾನ್ಗೆ ಇಲ್ಲೆ .ಅಷ್ಟು ಒಳ್ಳೆ ಕೆಲಸಗಾರ. ಅವನ ಮಾಣಿ ಹೇಳಿ ಭಾವಿಸಿದ ಸುಮಾರು ಜನ ಕನ್ಯಾ ಪಿತೃಗ ಅವನ ಕಂಡವು .ಮದುವೆಯ ಪ್ರಸ್ತಾಪವನ್ನೇ ಅವ ನಿರಾಕರಿಸುದರ ನೋಡಿ  ಕೆಲವು ಜನನ್ಗೊಕ್ಕೆ ಸಂಶಯ ಬಪ್ಪಲೆ ಸುರು ಆತು. ಅವನ ದೇಹ ಪ್ರಕೃತಿ ರಜ್ಜ ಕೂಸುಗಳ ಹಾಂಗೆ ಕಾಣುತ್ತಾ ಇದ್ದದೂ ಇದಕ್ಕೆ ಕಾರಣ ಆಗಿತ್ತು .ಅವನ ಬಗ್ಗೆ ತಿಳಿವಳೇ ಕೆಲವು ಕಂತ್ರಿಗ ಎಂತ ಆಟ ಮಾಡಿದರೂ ಪ್ರಯೋಜನ ಆತಿಲ್ಲೆ
ಈ ವರ್ಷ ಕಂಪನಿಗೆ ಒಳ್ಳೆ ಲಾಭ ಬಂದ ಕಾರಣ ಭಾರೀ ಸಂಭ್ರಮಂದ ಕಂಪನಿಯ ಎಲ್ಲೋರೂ ಸೇರಿ ಮೂರು ದಿನದ ಪ್ರವಾಸ ಹಾಕಿ ಕೊಂಡಿತ್ತಿದವು .ಮೊದಲ ದಿನ ಎಲ್ಲೆಲ್ಲೋ ತಿರುಗಿ ಬಂದು ಎರಡನೇ ದಿನ ಗೋಕರ್ಣಕ್ಕೆ ಬಂದೆಯ .ಎನ್ಗೋಗೆ ಎಲ್ಲ ಬಚ್ಚಿ ಸಾಕಾಗಿ ಹೋಗಿತ್ತು .ಎಂಗ ಹೆಮ್ಮಕ್ಕ ಎಲ್ಲರು  ಹೋಟೆಲಿಲಿ ಹೊತ್ತಪ್ಪಗ ಮನುಗಿತ್ತಿದೆಯ.ಆದ್ರೆ ಸುನೀತ ಮಾತ್ರ ಗೆಂಡನೊಟ್ಟಿನ್ಗೆ ಸುತ್ತಿ ಬಪ್ಪಲೆ ಹೆರ ಹೋಗಿತ್ತು .ಹೊತ್ತಪ್ಪಗ ಕಸ್ತಲೆ ಆವುತ್ತಾ ಇತ್ತು .ಓದಿ ಬಂದ ಸುನೀತ “ಮೇಡಂ ಮೇಡಂ ಅದೂ ..ಅದೂ ..ಕಿರಣ್  ..”ಎಂದು ಗಾಭರಿಯಿಂದ  ಹೇಳಿ ನಿಲ್ಲಿಸಿಯಪ್ಪಗ  ಹೆದರಿ  ಎಂತಾತು ಹೇಳಿ  ವಿಚಾರಿಸಿದೆ!ಸಮುದ್ರ ನೋಡುಲೆ ಹೋದೋರೆಲ್ಲ ಅಂಗಿ ತೆಗದು ಮಡುಗಿ ಮೀವಲೆ ಸಮುದ್ರಕ್ಕೆ ಇಳುದ್ದವು .ಕಿರಣ್ ನೀರಿನ್ಗಿಳಿಯದ್ದರೂ  ಕೆಲವು ಮಾಣಿಯಂಗ ಎನ್ಗಳಲ್ಲಿಪ್ಪೋರೆ  ಬಲಾತ್ಕಾರ ಮಾಡಿ ಅವನ ಕೋಟು ಅಂಗಿಗಳ ಬಿಚ್ಚಿದವು .ಉಬ್ಬಿದೆದೆಯ ಮುಚ್ಚುಲೆ ಬ್ರಾ ಹಾಕಿದ್ದ ಕಿರಣ್ ನಾಚಿಕೆಲಿ ಕುಗ್ಗಿ ಹೋಗಿ ಓಡಿ ಹೋಗಿ ನೀರಿಂಗೆ ಹಾರಿದ್ದ .ಹತ್ತರೆ ಇದ್ದೊರು  ಓಡಿ  ಹೋಗಿ ಅವನ ಹಿಡುದು ನೆಗ್ಗಿ ತಂದು ಕರೆಂಗೆ ಹಾಕಿದ್ದವು.ನೀರು ಹೊಟ್ಟೆಗೆ ಹೋದ್ದರ ಹೆರ ತೆಗವಲೆ ಟ್ರೈ ಮಾಡ್ತಾ ಇದ್ದವು .ಅವಂಗೆ ಇನ್ನೂ ಎಚ್ಚರ ಬೈನ್ದಿಲ್ಲೆ.ಹೇಳಿ ಸುನೀತಾ ಗಾಭರಿಂದ ಹೇಳಿಯಪ್ಪಗ ಎಲ್ಲೊರು ಗಾಭರಿಂದ ಸಮುದ್ರ ಕರೆನ್ಗೆ ಓಡಿದೆಯ
 ಆ ಮಾಣಿಯಂಗಳ ಮೋರೆಲಿ ಪಶ್ಚಾತ್ತಾಪ ಗಾಭರಿ ಕಾಣುತ್ತಾ ಇತ್ತು !sorry ಮೇಡಂ ಸುಮ್ಮನೆ ತಮಾಷೆಗಾಗಿ ಹೀಗೆ ಮಾಡಿದೆವು!ಹೀಗಾಗ ಬಹುದು ಅಂತ ಅಂದು ಕೊಂಡಿರಲಿಲ್ಲ .. ನಮ್ಮನ್ನು ಕ್ಷಮಿಸಿ ಮೇಡಂ “ಎಂದು ಕಾಲು ಹಿಡುದು ಕೊಂಡ ಪ್ಪಗ “ನಿಂಗ ಎಲ್ಲ ಮನುಷ್ಯರೇ ಅಲ್ಲ ಪಿಶಾಚಿಗ !ಬೇರೆಯೋರ ಬದುಕಿಲಿ ಆಟ ಆಡುವ ಮುರ್ಗಂಗ “ಹೇಳಿ ಬೈದು  ಕಿರಣ್ ಹತ್ತರೆ ಹೋದೆ.ಕಿರಣನ್ಗೆ  ಎಚ್ಚರ ಆಗಿತ್ತು .ಶಾಲು ಒಂದರ ಹೊದದು ಕೊಂಡಿತ್ತಿದ.ಎನ್ನ ಕಂಡ ಕೂಡಲೇ “ಮೇಡಂ ಆನು ಸಾಯಕ್ಕು ,ಸಾಯಕ್ಕು ಎನ್ನನ್ತೋರು ಬದುಕುಲೇ ಇವೆಲ್ಲ ಬಿಡ್ತವಿಲ್ಲೇ..ಹೇಳಿ ಸಣ್ಣ ಮಕ್ಕಳ ಹಾಂಗೆ ಕೂಗುಲೆ ಸುರು ಮಾಡಿದ .ಅಷ್ಟು ಸಮಯ ಕಟ್ಟಿ ಕೊಂಡ ಅವನ  ದುಗುಡ ಅನುಭವಿಸಿದ ಅವಮಾನ ಬೇನೆ ಎಲ್ಲ ಕಣ್ಣೀರಿನ ರೂಪಲ್ಲಿ ಹೆರ ಬಂತು. ಹತ್ತರೆ ಹೋಗಿ ಅವನ ಕೈಯ ಹಿಡುದು “ನೋಡು ಕಿರಣ್  ಸಾವದು ಹೇಡಿಗ .ಸತ್ತ ಮಾತ್ರಕ್ಕೆ ಸಮಸ್ಯೆ ಪರಿಹಾರ ಆವುತ್ತ ?ನಿನ್ನ ಪ್ರೀತಿಲಿ ಸಾಂಕಿದ ಅಮ್ಮನ ನೆನಪು ಮಾಡಿಗ .ಈಸ ಬೇಕು ಇದ್ದು ಜಯಿಸಬೇಕು ಹೇಳಿ ನಮ್ಮ ಹಿರಿಯೋರು ಹೇಳಿದ್ದವಿಲ್ಲೆಯ .ನೀನು ಬದುಕಿ ನಿನ್ನ ಹಾಂಗೆ ಅಬ್ಬೆ ಅಪ್ಪಂದ ತಿರಸ್ಕ್ರುತರಾದ ಮಕ್ಕೊಗೆ ಆಸರೆ ಆಯಕ್ಕು.ಅವಕ್ಕೆ ನೀನು ಹೊಂಗಿರಣ ಆಯಕ್ಕು  .ಎನಗೆ ನೀನು ಬೇರೆ ಅಲ್ಲ, ಎನ್ನ ಮಗ ಬೇರೆ ಅಲ್ಲ .ಇನ್ನ್ನೊಂದರಿ ಸಾವ ಆಲೋಚನೆ ಮಾಡ್ತಿಲ್ಲೆ ಹೇಳಿ ಮಾತು ಕೊಡು “ಹೇಳಿ ಹೇಳಿದೆ .”ಅಪ್ಪು ಕಿರಣ್ ,ನೀನು ಚಿನ್ನದಂಥಾ ಮಾಣಿ , ಎನ್ಗೊಗೆ ಬೇಕೇ ನೀನು ಬೇಕು, ಎನ್ಗಳದ್ದು ತಪ್ಪಾತು ಎಂಗಳ ತಪ್ಪಿನ ಹೊಟ್ಟೆಲಿ ಹಾಕಿ ಕ್ಷಮಿಸು ಎಂಗಳ “ಹೇಳಿ ಆ ಮಾಣಿಯಂಗ ಕ್ಷಮೆ ಕೇಳಿದವು
  ರಜ್ಜ ಹೊತ್ತು ನೀರವ ಮೌನ .ತಲೆ ತಗ್ಗುಸಿ ಕೂಗುತ್ತ ಇದ್ದ  ಕಿರಣ್  ಕೂಗುದು ನಿಲ್ಲಿಸಿ ಶಾಲಿಂದ ಕಣ್ಣು ಮೋರೆ ಉದ್ದಿಕೊಂಡ ದೃಢವಾಗಿ ಎದ್ದು ನಿಂದ “ಅಪ್ಪು ಮೇಡಂ ಆನಿನ್ನು ಆನಾಗಿಯೇ ಸಾವಲೆ ಹೆರಡುತ್ತಿಲ್ಲೆ.ಮತ್ತು ಆನು ಮಾಣಿಯೂ ಅಲ್ಲ ಕೂಸೂ ಅಲ್ಲ ಹೇಳುವ ವಿಚಾರವ ಮುಚ್ಚಿ ಮಡುಗುತ್ತಿಲ್ಲೆ .ಸತ್ಯವ ಹೇಳಿಯೇ ಸಮಾಜವ ಎದುರುಸುತ್ತೆ .ಎನ್ನ ಹಾಂಗೆ ಇಪ್ಪೋರಿನ್ಗೆ ಬದುಕುವ ಚೈತನ್ಯವ ತುಂಬುತ್ತೆ .ಆನು ಹೇಡಿಯ ಹಾಂಗೆ ಸಾಯ್ತಿಲ್ಲೆ ಬದುಕುತ್ತೆ ಬದುಕಿಯೇ ಬದುಕುತ್ತೆ “ಹೇಳಿ ಮೆಲ್ಲಂಗೆ ಆದರೆ ದೃಢವಾಗಿ ಹೇಳಿದ. ಸಮುದ್ರಲ್ಲಿ ಸೂರ್ಯ ಮುಳುಗಿತ್ತಿದ ಆದರೆ ಚಂದ್ರ ತನ್ನ ಹೊಂಗಿರಣಗಳ ಎಲ್ಲೆಡೆ ಹರಡುತ್ತಾ ಇದ್ದದರ ನೋಡಿ ಎಂಗ ಎಲ್ಲೊರು  ಸಂಭ್ರಮಿಸಿದೆಯ

Sunday 20 October 2013

ಭೂತಗಳ ಅದ್ಭುತ ಜಗತ್ತು :ಹಿಂದೂ ಮುಸ್ಲಿಂ ಬಾಂಧವ್ಯ ಬೆಸೆದ ಆಲಿ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ


 ಕುಂಬಳೆ ಪರಿಸರದ ಅರಿಕ್ಕಾಡಿಯಲ್ಲಿ ಆರಾಧಿಸಲ್ಪಡುವ ಆಲಿಚಾಮುಂಡಿ ಬಹಳ ಪ್ರಸಿದ್ಧವಾದ ದೈವತ ಆಲಿ ಚಾಮುಂಡಿ ಭೂತ . .   © copy rights reserved(c)Dr.Laxmi g Prasadಕುಂಬಳೆ ಸಮೀಪದ ಒಂದು ಗುಡ್ಡದಲ್ಲಿ ಪಾರೆ  ಸ್ಥಾನ ಎಂಬ ಕ್ಷೆತ್ರ ಇದೆ.  ಇದು  ಆಲಿ ಭೂತದ  ಮೂಲ ಸ್ಥಾನ .ಆರಿಕ್ಕಾಡಿ ಸಮೀಪದ ಪಾದೆ ಸ್ಥಾನದ  ಪ್ರಧಾನ ದೈವ  ಪಾಡಾಂಗರೆ  ಪೋದಿ(ಪಾಟಾರ್ ಕುಳಂಗದ ಭಗವತಿ ).ಆದರೆ ಈ ಭೂತ ಸ್ಥಾನ ದಲ್ಲಿ  ಆಲಿ ಚಾಮುಂಡಿ ಪ್ರಧಾನ ಭೂತಕ್ಕಿಂತ  ಹೆಚ್ಚು ಪ್ರಸಿದ್ಧಿ ಪಡೆದಿದೆ.ಅಜ್ಜಿ ಭೂತ ,  ಶಿರಾಡಿಭೂತ,ರುದ್ರ ಚಾಮುಂಡಿ ಮೊದಲಾದ ಅನೇಕ ದೈವಗಳು ಇತರ ಪ್ರಧಾನ ದೈವಗಳ ಸೇರಿಗೆ ದೈವಗಳಾಗಿದ್ದರೂ,ಪ್ರಧಾನ ದೈವಗಳಲಿಗಿಂತ ಹೆಚ್ಚು ಮಹತ್ವವನ್ನು ಪಡೆದಿದ್ದಾರೆ .ಇದು ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಡು ಬರುವ ವಿಶಿಷ್ಟ ವಿದ್ಯಮಾನ .ಇದು ದುರ್ಬಲರು ಸಬಲರಾಗುತ್ತಿರುವುದರ ಸಂಕೇತವೂ ಇರಬಹುದು .ಏನೇ ಇರಲಿ ಇಲ್ಲಿ ಆಲಿ ಭೂತ ಕೂಡಾ ಪ್ರಧಾನ ದೈವಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುವುದು ಗಮನಾರ್ಹ ಅಂಶವಾಗಿದೆ   ಎಲ್ಲ ಜಾತಿ ಧರ್ಮದ ಜನರು ಆಲಿ ಚಾಮುಂಡಿಯನ್ನು ಭಕ್ತಿಯಿಂದ ನಂಬಿ ಆರಾಧಿಸುತ್ತಾರೆ   © copy rights reserved(c)Dr.Laxmi g Prasad

 ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ  ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು.    © copy rights reserved(c)Dr.Laxmi g Prasadವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ.ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ   ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಆರಾಧಿಸಲ್ಪಡುವ ಭೂತ       © copy rights reserved(c)Dr.Laxmi g Prasad


ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ

 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ   ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ  ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು      © copy rights reserved(c)Dr.Laxmi g Prasad

 .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ ಜಾತಿ ಧರ್ಮದ ಮಿತಿ ಇಲ್ಲ. ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ  , ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು . ರಾಮ ಶೆಟ್ಟಿ ಎಂಬ ವೀರ ಶೈವ  ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ, ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.   © copy rights reserved(c)Dr.Laxmi g Prasad

 ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ  ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು ,ಮಾಪುಳ್ತಿ  ಧೂಮಾವತಿ  ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ  ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .   © copy rights reserved(c)Dr.Laxmi g Prasad
                                             
                          ಚಿತ್ರ :ಅಂತರ್ಜಾಲ (ನೀಡಿದವರು ಮಧುಸೂದನ ಶೆಟ್ಟಿ )
 ಆಲಿ ಭೂತ ಕೂಡಾ  ಮೂಲತಃ ಮುಸ್ಲಿಂ ಮಂತ್ರವಾದಿ . .ಬೇರೆ ಊರಿನಿಂದ ಆಶ್ರಯಕ್ಕಾಗಿ ಅಲೆದಾಡುತ್ತಾ ಬಂದು ಆರಿಕ್ಕಾಡಿ ಯ  ಪಾದೆ ಸ್ಥಾನದ ಬಿಲ್ಲವರಲ್ಲಿ ಆಶ್ರಯ ಬೇಡುತ್ತಾನೆ .ದಯಾಳುಗಳಾದ ಅವರು ಈತನ ದುಷ್ಟತನದ ಹೆಣ್ಣು ಹುಚ್ಚಿನ ಅರಿವಿಲ್ಲದೆ ಆತನಿಗೆ ಆಶ್ರಯ ಕೊಡುತ್ತಾರೆ ಆಲಿಬ್ಯಾರಿ ನೋಡಲು ಕಟ್ಟು ಮಸ್ತಾಗಿ ಸುಂದದರನಾಗಿದ್ದನು .ಇವನಿಗೆ ತುಂಬಾ ,ಹೆಣ್ಣಿನ ಚಪಲ ಇತ್ತು .   © copy rights reserved(c)Dr.Laxmi g Prasadಈತ   ಮಂತ್ರವಾದಿಯಾಗಿ  ಪ್ರಸಿದ್ಧಿ ಪಡೆದಿದ್ದನು. ತನ್ನ ಮಂತ್ರ ಶಕ್ತಿಯಿಂದ ಜನರಿಗೆ,ಊರ ಹೆಣ್ಣು ಮಕ್ಕಳಿಗೆ ನಾನ ರೀತಿಯ  ಕಿರುಕುಳ ಕೊಡುತ್ತಿದ್ದನು . ತನ್ನ್ನ ಮಂತ್ರ ಶಕ್ತಿಯಿಂದ ಹೆಣ್ಣು ಮಕ್ಕಳನ್ನು ತನ್ನೆಡೆಗೆ ಸೆಳೆದು ಕೊಳ್ಳುತ್ತಿದ್ದನು . ಆತನ ಮಂತ್ರ ಶಕ್ತಿಯ ಕಾರಣದಿಂದಾಗಿ ಹೆಣ್ಣು ಮರುಳನಾದ ಆತನನ್ನು ವಿರೋಧಿಸಲು , ಜನರಿಗೆ ಸಾಧ್ಯವಾಗುತ್ತಿರಲಿಲ್ಲ .ತನ್ನ ಮಂತ್ರ ಶಕ್ತಿಯಿಂದಾಗಿ ಆತ ಅಷ್ಟು ಬಲವಂತನಾಗಿದ್ದನು..   © copy rights reserved(c)Dr.Laxmi g Prasadಅವನು ಮಂತ್ರ ಶಕ್ತಿಯಿರುವ ಒಂದು ತಾಯಿತವನ್ನು ಕೊರಳಿಗೆ ಕಟ್ಟಿಕೊಂಡಿದ್ದನು .ಅದು ಅವನ ಮೈ ಮೇಲೆ ಇರುವ ತನಕ ಅವನನ್ನು ಸೋಲಿಸಲು ಯಾರಿಂದಲೂ ಅಸಾಧ್ಯವಾಗಿತ್ತು .ಅವನು ತನಗೆ ಆಶ್ರಯ ಕೊಟ್ಟ ಬಿಲ್ಲವರ ಮನೆಯ ದೇಯಿ ಎಂಬ ಹೆಣ್ಣು ಮಗಳನ್ನು ತನ್ನೆಡೆಗೆ ಸೆಳೆಯಲು ಯತ್ನಿಸಿದನು .ಅವಳು ಇವನೆಡೆಗೆ ಬಾರದೆ ಇದ್ದಾಗ ತನ್ನ ಮಂತ್ರ ಶಕ್ತಿಯಿಂದ ಅವಳನ್ನು ಸೆಳೆದು ಅವಳ ಮೇಲೆ ಅತ್ಯಾಚಾರ ಎಸಗಿ ಅವಳ ಸಾವಿಗೆ ಕಾರಣನಾದನು   © copy rights reserved(c)Dr.Laxmi g Prasad

 ಆಗ ಆ ಕುಟುಂಬದವರು ಮಂತ್ರ ದೇವತೆಗೆ ಕೈ ಮುಗಿದು “ಆಲಿ ಬ್ಯಾರಿಯಿಂದ ನಮಗೆ ರಕ್ಷಣೆ ಕೊಡು ನಮ್ಮನ್ನು  ಕಾಪಾಡು”ಎಂದು  ಬೇಡಿ ಕೊಂಡರು .ತನ್ನ ಭಕ್ತರ ಕಷ್ಟವನ್ನು ಅರಿತ ಮಂತ್ರ ದೇವತೆ ಒಂದು ಸುಂದರ ಹೆಣ್ಣಾಗಿ ಆವಿರ್ಭವಿಸಿ ,ತನ್ನ ಒಡನಾಡಿ ಹೆಣ್ಣು ಮಕ್ಕಳೊಂದಿಗೆ ಒಂದು ಕೆರೆಯಲ್ಲಿ/ಹೊಳೆಯಲ್ಲಿ  ಜಲ ಕ್ರೀಡೆಯಾಡುತ್ತದೆ. ಆ ಹೆಣ್ಣಿನ ರೂಪು ಬೆಡಗು ಬಿನ್ನಾಣ ನೋಡಿ ಮರುಳಾದ ಆಲಿ ಬ್ಯಾರಿ ಅವಳಲ್ಲಿ ಮೋಹಗೊಂಡು ಕೆರೆಯ ಬಳಿಗೆ ಬರುತ್ತಾನೆ . ಆಗ ಆ ಹೆಣ್ಣಿನ ಮಾಯಾ ರೂಪು ಅವನಲ್ಲಿ ನೀನು ಬಟ್ಟೆಯನ್ನು ಕಳಚಿ ಕೆರೆಗೆ ಬರಬೇಕು ಎಂದು ಹೇಳುತ್ತದೆ .ಅಂತೆಯೇ ಅವನು ತನ್ನ ಬಟ್ಟೆಯನ್ನು ಬಿಚ್ಚಿ ಕೆರೆಗೆ ಇಳಿಯುತ್ತಾನೆ   © copy rights reserved(c)Dr.Laxmi g Prasad .ಆಗ ಆ ಹೆಣ್ಣು ರೂಪದ ಮಂತ್ರ ದೇವತೆ ಅದು ನಿನ್ನ ಕೊರಳಲ್ಲಿ ಇರುವುದು ಏನು ?ಅದನ್ನು ಅಲ್ಲಿಟ್ಟು ಬಾ “ಎಂದು ಹೇಳಿ ಅವನ ಮಂತ್ರ ಶಕ್ತಿಯಿರುವ ತಾಯಿತವನ್ನು ತೆಗೆಯುವಂತೆ ಹೇಳುತ್ತದೆ . ಹೆಣ್ಣಿ ಮೋಹಕ್ಕೆ ಒಳಗಾದ ಆತ ಹಿಂದೆ ಮುಂದೆ ವಿವೇಚಿಸದೆ ತನ್ನ ಮಂತ್ರ ಶಕ್ತಿಯ ತಾಯಿತವನ್ನು ತೆಗೆದಿಟ್ಟು ಕೆರೆಗೆ ಇಳಿಯುತ್ತಾನೆ .ಮಂತ್ರ ಶಕ್ತಿಯುಳ್ಳ ತಾಯಿತದ ಬಲವಿಲ್ಲದ ಆತನನ್ನು ಸ್ತ್ರೀ ರೂಪಿನ ಮಂತ್ರ ದೇವತೆ ಸಂಹರಿಸುತ್ತದೆ ಎಂಬ ಐತಿಹ್ಯವು ಪ್ರಚಲಿತವಿದೆ . ಆತನನ್ನು ಮಂತ್ರ ದೇವತೆ ತನ್ನ ಸೇರಿಗೆ ದೈವವನ್ನಾಗಿ ಮಾಡುತ್ತದೆ .ಆತ ಮುಂದೆ ಆಲಿ ಭೂತ ,ಆಲಿ ಚಾಮುಂಡಿ ಭೂತವಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ   © copy rights reserved(c)Dr.Laxmi g Prasad

ವಾಸ್ತವಿಕ ನೆಲೆಯಲ್ಲಿ ಆಲೋಚಿಸುವುದಾದರೆ ಅಕಸ್ಮಾತ್ ಆಗಿ ಕೆರೆಯಲ್ಲಿ ಮುಳಗಿ ದುರಂತವನ್ನಪ್ಪಿರುವ ಆಲಿ ಬ್ಯಾರಿಯ ಜೊತೆಗೆ ದೈವ ಕಥಾನಕ ಸೇರಿಕೊಂಡಿರುವ ಸಾಧ್ಯತೆ ಇದೆ .ಅಥವಾ ಹೆಣ್ಣಿನ ಮರುಳನಾದ ಆತ ಕೆರೆ /ಹಳ್ಳದಲ್ಲಿ ಸ್ನಾನ ಮಾಡುತ್ತಿರುವ ಸ್ತ್ರೀ ಸಮೀಪಕ್ಕೆ ಹೋಗಲೆತ್ನಿಸಿ ದುರಂತವನ್ನಪ್ಪಿರಬಹುದು ,ಈ ಬಗ್ಗೆ “ಅತಿರೇಕದ ವರ್ತನೆಯ ಮಂತ್ರವಾದಿಯೋಬ್ಬನನ್ನು ಜನರೇ ಸಿಟ್ಟಿಗೆದ್ದು ಗುಪ್ತವಾಗಿ ಮುಗಿಸಿದ ವೃತ್ತಾನ್ತಕ್ಕೆ ಬೇರೊಂದು ಬಣ್ಣ ಬಂದಿರಲೂ ಬಹುದು .ಭೂತ ಮಹಿಮೆಗಳನ್ನು ಪ್ರಚುರ ಗೊಳಿಸಲು ಇಂತ ಕಥೆಗಳು ಅನುಕೂಲ “ಎಂದು ಡಾ. ಅಮೃತ ಸೋಮೆಶ್ವರರು ಅಬಿಪ್ರಾಯ ಪಟ್ಟಿದ್ದಾರೆ .ಇತರ ಭೂತಗಳಂತೆ ಆಲಿ ಭೂತಕ್ಕೆ ಅಣಿ ಜಕ್ಕೆಳಣಿ ಗಳು ಇರುವುದಿಲ್ಲ ಈತನಿಗೆ ಬಣ್ಣ ಬಣ್ಣದ ಲುಂಗಿ ,ಸೊಂಟದ ಪಟ್ಟಿ ,ತಲೆಗೆ ಬಂಗಾರದ /ಬೆಳ್ಳಿಯ ಟೊಪ್ಪಿ ಇರುತ್ತದೆ.ಮೈಗೆ ಗಂಧ ಪೂಸಿ ಮುಖಕ್ಕೆ ಕಪ್ಪು ಬಣ್ಣ ಹಾಕಿದ ಸರಳ  ಅಲಂಕಾರ ಇರುತ್ತದೆ.   © copy rights reserved(c)Dr.Laxmi g Prasad

ಈ ಭೂತಕ್ಕೆ ತುಂಬಾ ಜನರು ಹರಿಕೆ ಹಾಕುತ್ತಾರೆ.ಅನೇಕ ಮುಸ್ಲಿಂ ಸ್ತ್ರೀ ,ಪುರುಷರೂ ಆಲಿ ಭೂತಕ್ಕೆ ಹರಿಕೆ ಒಪ್ಪಿಸಿತ್ತಾರೆ .”ವೇಶ್ಯಾ ವೃತ್ತಿಯ ಹೆಂಗಳೆಯರೂ ಈತನಿಗೆ ನಡೆದುಕೊಳ್ಳುತ್ತಾರೆ,ಈ ವರ್ಷದ ಬೆಳೆ ಹೇಗಿದೆ ? ಎಂಬ ಸರಸ ಪ್ರಶ್ನೆಯನ್ನು ಈ ರಸಿಕ ದೈವ ಕೇಳುವುದುಂಟು “ಎಂದು ಅಮೃತ ಸೋಮೆಶ್ವರರು ಹೇಳಿದ್ದಾರೆ ,”ಮುಸ್ಲಿಂ ಮೂಲದ ವ್ಯಕ್ತಿಯೊಬ್ಬ ದೈವೀಕರಣಗೊಂಡು ಸಾವಿರಾರು ಜನರ ಆರಾಧ್ಯ ಶಕ್ತಿಯಾಗಿರುವುದು ವಿಶೇಷ  ಮಾತ್ರವಲ್ಲ,ಈ ಆರಾಧನಾ ವಿದ್ಯಮಾನವು ಆರಾಧನಾ ಮಟ್ಟದ ಕೋಮು ಸೌಹಾರ್ದಕ್ಕೆ ಒಂದು ಕೊಡುಗೆಯೂ ಆಗಿದೆ “ಎಂದು ಅಮೃತ ಸೋಮೆಶ್ವರರು ಅಭಿಪ್ರಾಯ ಪಟ್ಟಿದ್ದಾರೆ .     © copy rights reserved(c)Dr.Laxmi g Prasad
ಆಧಾರ ಗ್ರಂಥಗಳು 
ಡಾ..ಅಮೃತ ಸೋಮೇಶ್ವರ :ತುಳುಜಾನಪದ ಕೆಲವು ನೋಟಗಳು 
ಡಾ.ವಿವೇಕ ರೈ   ತುಳು ಜನಪದ ಸಾಹಿತ್ಯ 
ಡಾ.ಚಿನ್ನ್ನಪ್ಪ ಗೌಡ -ಭೂತಾರಾಧನೆ -ಒಂದು ಜನಪದೀಯ ಅಧ್ಯಯನ 
ಪಾರೆ ಮನೆ ಸುಬ್ಬಯ್ಯ ಭಟ್ ಅವರು ನೀಡಿದ ಮಾಹಿತಿ 
ಡಾ.ಲಕ್ಷ್ಮೀ ಜಿ ಪ್ರಸಾದ(ಇದರಲೇಖಕಿ ) :ಭೂತಗಳ ಅದ್ಭುತ ಜಗತ್ತು
(ಈ ಅದ್ಭುತ ವರ್ಣ ಚಿತ್ರಗಳನ್ನು ಒದಗಿಸಿ ಕೊಟ್ಟ  ಕೊಟ್ಟಶ್ರೀ  ಮಧುಸೂದನ ಶೆಟ್ಟಿ ಅವರಿಗೆ ಕೃತಜ್ಞ ತೆಗೆಳು)

Monday 7 October 2013

ನಮ್ಮೂರಿನ ನವರಾತ್ರಿ ವೇಷಗಳ ಇತಿಹಾಸ - ಡಾ.ಲಕ್ಷ್ಮೀ ಜಿ ಪ್ರಸಾದ್

            

ಮೊನ್ನೆ ನವರಾತ್ರಿಯ ಆರಂಭದ ದಿನ ಎಣ್ಮೂರು ಶಾಲೆಗೆ ಬಂದ ಹುಲಿ ವೇಷದ ಕುಣಿತ ನೋಡಿ ಭಾರಿ ಕುಶಿ ಆಯಿತು ನನಗೆ ನಾವು ಚಿಕ್ಕವರಿದ್ದಾಗ ನಮ್ಮ ಊರು ಕೊಳ್ಯೂರಿಗೆ ಹುಲಿ ,ಹನುಮಂತ ,ಕೃಷ್ಣ ,ಕೊರಗ ,ಮುರ್ಕುಂಡೆ,ಮೊದಲಾದ ಅನೇಕ ವೇಷಗಳು ಬರುತ್ತಿದ್ದವು .ಕೃಷ್ಣ  ವೇಷ ನಮಗೆಲ್ಲ ಅಚ್ಹುಮೆಚ್ಚು ಯಾಕೆಂದರೆ ಕೃಷ್ಣ ನಮ್ಮನ್ನು ಬೆದರಿಸುತ್ತಿರಲಿಲ್ಲ.ಉಳಿದ ವೇಷಗಳು ನಮ್ಮನ್ನು ಹೆದರಿಸುತ್ತಿದ್ದವು !
© ಡಾ.ಲಕ್ಷ್ಮೀ ಜಿ ಪ್ರಸಾದ್ 

ಆದ್ರೆ ಹುಲಿ ವೇಷಕ್ಕೆ ನಾವು ಹೆದರುತ್ತಿರಲಿಲ್ಲ ಯಾಕೆಂದರೆ ಹುಲಿ ವೇಷ ಒಂದೇ ಯಾಗಿ ಬರುವುದಿಲ್ಲ .ನಾಲ್ಕಾರು ಜನರ ತಂಡ ಇರುತ್ತದೆ ಜೊತೆಗೆ ಅವ್ರ ಹಿಂದೆ ನಮ್ಮದೇ ವಯಸ್ಸಿನ ಮಕ್ಕಳ ಗುಂಪು ಕೂಡಾ ಇರುತ್ತಿತ್ತು .ಹುಲಿ ವೇಷದವರು ಬೇರೆ ಬೇರೆ ಮನೆಗೆ ಹೋಗಿ ಕುಣಿವಾಗ ಹಿಂದಿನಿಂದ ಹಿಂಬಾಲಿಸಿಕೊಂಡು ಹೋಗಿ ಕುಣಿತವನ್ನು ನೋಡುತ್ತಿತ್ತು ಈ ಗುಂಪು .ನಮ್ಮ ಮನೆ ದಾಟಿ ಮುಂದೆ ಹೋಗುವಾಗ ನಾವು ಕೂಡ ಆ ಗುಂಪಿನೊಂದಿಗೆ ಸೇರಿಕೊಳ್ಳುತ್ತಿದ್ದೆವು.ನಾಲ್ಕಾರು ಮನೆ ಹೋಗಿ ಹಿಂದೆ ಬರುತ್ತಿದ್ದೆವು !

ನಮ್ಮೂರಿನಲ್ಲಿ ಸುಮಾರು 50 ವರ್ಷ ಮೊದಲು ಅಂದರೆ ನನ್ನ ಅಮ್ಮ ಚಿಕ್ಕವರಾಗಿದ್ದಾಗ   ಕರಡಿ ವೇಷ ಮತ್ತು ಕೊರಗ ವೇಷ ಮಾತ್ರ ಇತ್ತಂತೆ .ನಮ್ಮ ಊರಿನ  ಕೃಷ್ಣಪ್ಪ ಸೇರಿಗಾರರ ತಂಡದ ಕರಡಿ ವೇಷ ಕುಣಿತಕ್ಕೆ ತುಂಬಾ ಪ್ರಸಿದ್ದಿ ಇತ್ತು .ಬಹಳ ಚೆನ್ನಾಗಿ ಕುಣಿಯುತ್ತ್ತಿದ್ದರು. ಆನಂದ ಸೇರಿಗಾರರ ದೊರೆ ವೇಷದ ಕುಣಿತ ಅಭಿನಯ ನಿಜವಾಗಿಯೂ ಅದ್ಭುತ !ಬ್ರಿಟಿಷ್  ದೊ ರೆಯಂತೆ  ಮಖಕ್ಕೆ  ಕೆಂಪು ಬಣ್ಣ ಹಚ್ಚಿ ಕೋವಿ ಹಿಡಿದು ನಿಂತರೆ ನಿಜವಾಗಿಯೂ ಬೇಟೆಗೆ ಹೊರಟಂತೆ ಭಾಸವಾಗುತ್ತಿತ್ತು © ಡಾ.ಲಕ್ಷ್ಮೀ ಜಿ ಪ್ರಸಾದ್  . ಇದು ಬ್ರಿಟಿಷ್ ದೊರೆಗಳ ಬೇಟೆಯ ಅಣಕವೇ ಆಗಿದೆ  ನಮ್ಮ  ನವರಾತ್ರಿಯ ಹುಲಿ ಕುಣಿತದಲ್ಲಿ ಪ್ರಧಾನ ಪಾತ್ರವಹಿಸುವ ಕೋವಿಧಾರಿಗೆ ದೊರೆ ಎನ್ನುತ್ತಾರೆ ಆತನಿಗೆ ತಲೆಗೆ ಒಂದು ಬ್ರಿಟಿಷರ ಟೊಪ್ಪಿ ಮುಖಕ್ಕೆ ಕೆಂಪು ಬಣ್ಣ ಇರುತ್ತದೆ. ಆದ್ದರಿಂದ ಇದು ಬ್ರಿಟಿಷ್ ದೊರೆ /ಅಧಿಕಾರಿಯ ಬೇಟೆಯನ್ನು ಸೂಚಿಸುತ್ತದೆ  .

45-50 ವರ್ಷಗಳ ಮೊದಲು ಕೋಳ್ಯೂರಿನ ತಂಡದವರು  ಕೋಳ್ಯೂರು ಮೀಯಪದವು ವರ್ಕಾಡಿ ಮಂಜೇಶ್ವರ ಸುತ್ತಮುತ್ತ ಲಿನ
ಪ್ರದೇಶಗಳಲ್ಲಿ ಕರಡಿ ವೇಷ ಹಾಕಿ ಕುಣಿಯುತ್ತಿದ್ದರಂತೆ .ಆ ಕಾಲದಲ್ಲಿ ಮಂಗಳೂರಿನಲ್ಲಿ ಹುಲಿ ವೇಷ ಇತ್ತಂತೆ .

ನಂತರ ಕೋಳ್ಯೂರಿನ ಕರಡಿ ವೇಷ ಹುಲಿ ವೇಷ ಆಗಿ ಬದಲಾವಣೆ ಆಯಿತು .ಜೊತೆಗೆ ತಂಡದಲ್ಲಿ ಹಣ ಹಂಚುವಾಗಲೋ ಅಥವಾ ಇನ್ನು ಯಾವುದೋ ವಿಚಾರಕ್ಕೆ ಒಡಕು ಕಾಣಿಸಿಕೊಂಡಿತು.ಸುಮಾರು ೪೦ ವರ್ಷ ಮೊದಲು ಇವರ ತಂಡದಲ್ಲಿದ್ದ ರಾಮ ಎಂಬವರುನಮ್ಮ ಊರಿನಲ್ಲಿ ಸುರುವಿಗೆ  ನಾರದ ವೇಷ ಹಾಕಿದರು .ಅವರ ವೇಷ ಬಹಳ ಯಶಸ್ವಿಯಾಯಿತು .ಅವರಿಗೆ ಸಾಕಷ್ಟು ದುಡ್ಡೂ ಸಂಗ್ರಹ ಆಯಿತು .ಅದನ್ನು ನೋಡಿಯೋ ಏನೋ, ನಮ್ಮೂರಿನ ಮೆಟ್ಟು ಕುಂಡೆಯ ಒಬ್ಬರು ಮುರ್ಕುಂಡೆ ವೇಷವನ್ನು ಹಾಕಲು ಶುರುಮಾಡಿದರು © ಡಾ.ಲಕ್ಷ್ಮೀ ಜಿ ಪ್ರಸಾದ್ .ಸುಮಾರು ೩೫ ವರ್ಷ ಮೊದಲು ಮುರ್ಕುಂಡೆ ವೇಷ ಸುರು ಆಯಿತು .ಕೈಯಲ್ಲಿ ಒಂದು ಮನುಷ್ಯನ ಗೊಂಬೆ ಹಿಡಿದು ಕೊಂಡು
"ಉರ್ನಿಟ್ಟು ಮುರ್ಕುಂಡೆ ಲಡ್ಡು ಮಿಠಾಯಿ ,
ಕಳಿ ಕಳಿ ಚೋಮ ಜಕ್ಕು ಮದೀನ  "
ಎಂದು ಹಾಡುತ್ತಾ ಬರುವ ಮುರ್ಕುಂಡೆ  ವೇಷ ಮನೆ ಮನೆಗೆ ಬಂದು ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಅಣಕು ಮಾಡುತ್ತದೆ.ಮಲಯಾಳ ಭಾಷೆಯಲ್ಲಿರುವ ಈ ಹಾಡಿನ ಅರ್ಥ ಹೀಗಿದೆ
 "ಉದ್ದಿನ ಹಿಟ್ಟಿನ ಮುರುಕು ಉಂಡೆ (ತಿಂಡಿ   )
ಲಡ್ಡು ಮಿಠಾಯಿ ,ಆಟವಾಡು ಆಟವಾಡು ಚೋಮ ಜಕ್ಕು ಮದೀನ "
ಇವರಿಗೆಲ್ಲ ಸಾಕಷ್ಟು ದುಡ್ಡು ಸಂಗ್ರಹವಾಗ ತೊಡಗಿದಾಗ ಬೇರೆಯವರು ರಾಮ ಕೃಷ್ಣ ಹನುಮಂತ ಮೊದಲಾದ ವೇಷ ಹಾಕಲು ಆರಂಭಿಸಿದರು .ಇವರಂತೆ ನಿತ್ಯ ಭಿಕ್ಷೆ ಬೇಡುತ್ತಿದ್ದ ಹಲವರೂ ರಾಮ ಕೃಷ್ಣ ಮೊದಲಾದವರ ವೇಷ ಹಾಕ ತೊಡಗಿದರು .ನವರಾತ್ರಿ ವೇಷಗಳನ್ನು ಹಾಕಿದವರು ಅದರ ಪಾವಿತ್ರ್ಯ ವನ್ನು ಮೂಲೆಗೆ ತಳ್ಳಿ ಸಂಜೆ ಹೊತ್ತು ಕುಡಿದು ತೂರಾಡ ತೊಡಗಿದಾಗ ಯಾವುದೇ  ದೇವರ ವೇಷಗಳನು ಹಾಕದಂತೆ ನಿರ್ಬಂಧಬಂತು ,ಹಾಗಾಗಿಮೊದಲು ಹನುಮಂತ ವೇಷ ಹಾಕುತ್ತಿದ್ದ ಸಂಜೀವ ಈಗ ಶೂರ್ಪನಖಿ ಹಾಕುತ್ತಿದ್ದಾರೆ .ಹಾಗೆ ಇತರರು ಬೇರೆ ವೇಷ ಹಾಕುತ್ತಾರೆ .

ಇನ್ನು ಕೊರಗ ವೇಷ ದುಡ್ಡು ಸಂಗ್ರಹದ ಉದ್ದೇಶದಿಂದ ಪ್ರಾರಂಭವಾದದ್ದಲ್ಲ.ಭೀಕರವಾದ ಕಷ್ಟ ರೋಗ ರುಜಿನಗಳು ಬಂದಾಗ ಕೊರಗ ವೇಷ ಹಾಕಿ ಬೇಡುತ್ತೇನೆ ಎಂಬ ಹರಿಕೆ ಹೇಳಿ ಕೊಳ್ಳುತ್ತಿದ್ದರು.ಅದನ್ನು ನೆರವೇರಿಸುವುದಕ್ಕಾಗಿ ಕೊರಗ ವೇಷ ಹಾಕುತ್ತಿದ್ದರು .ಹರಿಕೆಯಾಗಿ ಕೊರಗ ವೇಷವನ್ನು ಬ್ರಾಹ್ಮಣರು ಕೂಡಾ ಹಾಕುತ್ತಿದ್ದರು .ನಾನು ಚಿಕ್ಕವಳಿದ್ದಾಗ (ಸುಮಾರು ಹೈ ಸ್ಕೂಲ್ ಓದುವ ಸಮಯ )ನಮ್ಮ ಮನೆಗೆ ಕಾಸರಗೋಡಿನ ಹವ್ಯಕ ಬ್ರಾಹ್ಮಣರೊಬ್ಬರು ಹೇಳಿ ಕೊಂಡ  ಹರಿಕೆ ತೀರಿಸುವುದಕ್ಕಾಗಿ ಕೊರಗ ವೇಷ ಹಾಕಿ ಬಂದಿದ್ದರು !ಈಗ ಕೊರಗ ಜನಾಂಗಕ್ಕೆ ಅವಮಾನ ಆಗುತ್ತದೆ ಹೇಳುವ ಕಾರಣಕ್ಕೆ ಆ ಸಮುದಾಯದವರು ಬಿಟ್ಟು ಬೇರೆಯವರು ಕೊರಗ ವೇಷ ಹಾಕದಂತೆ ನಿರ್ಬಂಧ ಇದೆ 
© ಡಾ.ಲಕ್ಷ್ಮೀ ಜಿ ಪ್ರಸಾದ್ ,ಆದರೂ ಹರಿಕೆ ಹೇಳಿ ಕೊಂಡವರು ಗುಟ್ಟಾಗಿ ಕೊರಗ ವೇಷ ಹಾಕಿ ದೇವಸ್ಥಾನಕ್ಕೆ ಮಾತ್ರ ಬಂದು ಅಲ್ಲಿ ಕುಣಿದು ಭಿಕ್ಷೆ ಕೇಳಿ ಹರಿಕೆ ತೀರಿಸುತ್ತಾರೆ ಎಂದು ಹೇಳುತ್ತಾರೆ
© ಡಾ‌.ಲಕ್ಷ್ಮೀ ಜಿ ಪ್ರಸಾದ್ 
ಮೈ ಮುಖಕ್ಕೆ ಬಣ್ಣ ಬಳಿದು ಹುಲಿವೇಷ ಹಾಕುವ ಪದ್ದತಿ ಸುಮಾರು ಎಂಬತ್ತರ ದಶಕದ ಆಸುಪಾಸಿನಲ್ಲಿ ಆರಂಭವಾಯಿತು.ಅದಕ್ಕೆ ಮೊದಲು ಸೆಣಬು ಅಥವಾ ಉಣ್ಣೆಯಿಂದ ತಯಾರಿಸಿದ ಹುಲಿಯ ಹಳದಿ ಬಣ್ಣದ ದಿರಿಸು ಮತ್ತು ಹುಲಿಯ ಮುಖವಾಡ ಧರಿಸಿ ಕುಣಿಯುತ್ತಿದ್ದರು‌.ಈ ಹಳೆಯ ಸಂಪ್ರದಾಯದ ಹುಲಿ ವೇಷ  ಈಗಲೂ ಕೆಲವೆಡೆ ಪ್ರಚಲಿತವಿದೆ 


ಈಗ ವರ್ಷದಿಂದ ವರ್ಷಕ್ಕೆ ನವರಾತ್ರಿ ವೇಷ ಹಾಕುವವರ ಸಂಖ್ಯೆ ಇಳಿಮುಖವಾಗುತ್ತಿದೆ.ಮೊದಲು ನಮ್ಮಲ್ಲಿ ಮನೆ ಮನೆಗೆ ಆಟಿ  ಕಳಂಜ ,ಸೋಣೆಯ ಜೋಗಿ ,ಕಾವೇರಿ ಪುರುಷ ಮೊದಲಾದವರು ಬರುತ್ತಿದ್ದರು .ಅವರನ್ನು ನಾವು ಅಪೂರ್ವ ಜನಪದ ನರ್ತಕರೆನ್ದೂ ನಮ್ಮ ಸಂಸ್ಕೃತಿಯ ಪ್ರವಾಹಕರೆಂದು ಗೌರವದಿಂದ ಕಾಣದೆ ಭಿಕ್ಷುಕರಂತೆ ಕಂಡ ಕಾರಣ ಈಗ ಇವನ್ನು ನಾವು ಕಾಣುವುದಿಲ್ಲ .ನಮ್ಮಿಂದ ಈ ಕಲಾ ಪ್ರಕಾರಗಳು ದೂರವಾಗಿವೆ .ಹಾಗೆಯೆ ನವರಾತ್ರಿಯ ಹುಲಿ ಕುಣಿತ ಹಾಗು ಇತರ ವೇಷಗಳು ಮರೆಯಾಗದಂತೆ ನಾವು ಎಚ್ಚರ ವಹಿಸಬೇಕಾಗಿದೆ,ಜೊತೆಗೆ ಆ ನವರಾತ್ರಿ ವೇಷಗಳ ಮಹತ್ವ ಮತ್ತು  ಪಾವಿತ್ರ್ಯತೆಯನ್ನೂ ಕಾಯ್ದಿತ್ತುಕೊಳ್ಳ ಬೇಕಾಗಿದೆ