Thursday 26 November 2015

ಸಾವಿರದೊಂದು ಗುರಿಯೆಡೆಗೆ :261 ತುಳುನಾಡ ದೈವಗಳು -ಕೋಟೆರಾಯ (c)ಡಾ.ಲಕ್ಷ್ಮೀ ಜಿ ಪ್ರಸಾದ





                            ಕೋಟೆರಾಯ ಮೂಲಸ್ಥಾನ: ಚಿತ್ರ ಕೃಪೆ :ವಿಜಯಕರ್ನಾಟಕ

ಕುಂದಾಪುರ ಸುತ್ತ ಮುತ್ತ ಕೋಟೆರಾಯ ಎಂಬ ದೈವಕ್ಕೆ ಆರಾಧನೆ ಇದೆ.ಮಡಾಮಕ್ಕಿ ವೀರಭದ್ರ ದೇವಸ್ಥಾನದ ಪ್ರಧಾನ ದೈವ ಈತ .ಅಲ್ಲಿ ನಿಧಿಯನ್ನು ಕಾಯುವ ಕಾರ್ಯ ಈತನದು.
ಪ್ರಚಲಿತ ಐತಿಹ್ಯದಂತೆ 1200 ವರ್ಷಗಳ ಹಿಂದೆ ಈ ಪರಿಸರವನ್ನು ಕೋಟೆರಾಯ ಎಂಬ ಅರಸ ಆಳುತ್ತಿದ್ದ ,ಶತ್ರುಗಳ ಹುನ್ನಾರಕ್ಕೆ ಸಿಕ್ಕಿದ ಈತ ದುರಂತವನ್ನಪ್ಪಿ ರುದ್ರನ ಅನುಗ್ರಹದಿಂದ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.
 ಉಡುಪಿ ಕುಂದಾಪುರ ಕಡೆ ಕೋಟೆರಾಯ  ದೈವಸ್ಥಾನಗಳು ಇವೆ .ಇಲ್ಲಿ ಈತನಿಗೆ ನೇಮ ಕೊಟ್ಟು ಆರಾಧಿಸುತ್ತಾರೆ .
ಅರಸಮ್ಮನ ಕಾನು ಸಮೀಪದ ಬೆಟ್ಟದಲ್ಲಿ ಕೋಟೆರಾಯನ ಮೂಲ ಸ್ಥಳ ಪತ್ತೆಯಾಗಿದೆ ಅಲ್ಲಿ ಈತ ಲಿಂಗ ರೂಪಿಯಾಗಿ ನೆಲೆ ನಿಂತಿದ್ದಾನೆ.
.ಕೋಟೆರಾಯನಿಗೆ  ಡಕ್ಕೆ ಬಲಿಯಲ್ಲಿ  ಆರಾಧನೆ ಇದೆ .ಕೋಟೆರಾಯನ ಕುರಿತಾಗಿ ಡಕ್ಕೆ ಬಲಿಯಲ್ಲಿ ವೈದ್ಯರು ಹೇಳುವ ಹಾಡುಗಳಲ್ಲಿ ಈ ರೀತಿಯ ಕಥಾನಕವಿದೆ.
ಕಲಿಯುಗದ ಆರಂಭದಲ್ಲಿ ಕೋಟೆತುರ ಎಂಬ ಸ್ಥಳದಲ್ಲಿ ಬ್ರಹ್ಮರಾಯನೆಂಬಾತ ಧರ್ಮದಿಂದ ರಾಜ್ಯವಾಳುತಲಿದ್ದನು. ಬ್ರಹ್ಮರಾಯ-ಚಂದ್ರಮುಖಿ ದಂಪತಿಗಳಿಗೆ ಪುತ್ರ ಸಂತಾನವಿರುವುದಿಲ್ಲ. ಈ ಬಗ್ಗೆ ಚಂದ್ರಮುಖಿ ದುಃಖಿಸಲು ಬ್ರಹ್ಮರಾಯ ತಪಸ್ಸನ್ನಾಚರಿಸಿ ಶ್ರೀಹರಿಯನ್ನು ಮೆಚ್ಚಿಸಿ ವರ ಪಡೆಯಲು ನಿರ್ಧರಿಸುತ್ತಾನೆ. ಅನಂತರ ರಾಜ್ಯ ಉಸ್ತುವಾರಿಯನ್ನು ಮಂತ್ರಿಗಳಿಗೆ ವಹಿಸಿ ಘೋರಾರಣ್ಯದಲ್ಲಿ ಮಡದಿಯೊಂದಿಗೆ ನಿಷ್ಠೆಯಿಂದ ತಪವನ್ನಾಚರಿಸುತ್ತಾನೆ. ಅವನ ನಿಷ್ಠೆಗೆ ಒಲಿದ ಪಶುಪತಿ ಪುತ್ರಸಂತಾನದ ವರವನ್ನು ಕೊಡುತ್ತಾನೆ. ಅನಂತರ ಹತ್ತನೆ ತಿಂಗಳಿನಲ್ಲಿ ಬ್ರಹ್ಮರಾಯನ ಮಡದಿ ಚಂದ್ರಮುಖಿ ಗಂಡುಮಗುವಿಗೆ ಜನ್ಮ ಕೊಡುತ್ತಾಳೆ. ಆ ಮಗುವಿಗೆ ಕೋಟೆರಾಯ ಎಂದು ಹೆಸರಿಡುತ್ತಾರೆ. ಸರ್ವವಿದ್ಯೆಗಳಲ್ಲೂ ಪಾರಂಗತನಾಗುತ್ತಾನೆ ಕೋಟೆರಾಯ. ಬ್ರಹ್ಮರಾಯನಿಗೆ ಮುಪ್ಪು ಆವರಿಸಲು ಮಗ ಕೋಟೆರಾಯನಿಗೆ ಕೋಟೆತುರದ ಪಟ್ಟವನ್ನು ಕಟ್ಟುತ್ತಾನೆ. ಬ್ರಹ್ಮರಾಯನ ಮರಣಾನಂತರ ಕೋಟೆರಾಯ ದಿಗ್ವಿಜಯಕ್ಕೆ ಹೊರಡುತ್ತಾನೆ. ಅಗಣಿತ ಸೈನ್ಯವನ್ನು ಸೇರಿಸಿಕೊಂಡು, ಹಾರುಕುದ್ರೆ ಏರಿಕೊಂಡು ಕಾರ್ಕಳಕ್ಕೆ ತೆರಳಿ, ಊರ ಕೋಟೆಯ ಹೊಕ್ಕು ಮುರಿದು ಬೈರ್‍ಸೂಡನ ಕಪ್ಪವನ್ನು ಪಡೆಯುತ್ತಾನೆ. ಬಾರ್ಕೂರಿಗೆ ತೆರಳಲು ಇವನ ಸಾಹಸಕ್ಕೆ ಹೆದರಿ ಬದ್ದಪ್ ಕಪ್ಪಕಾಣಿಕೆ ಕೊಡುತ್ತಾನೆ. ಹೀಗೆ ಕದ್ರಿ, ಕಾಲ್ ತೋಡು, ಭಟ್ಕಳ, ಕೊಲ್ಲೂರು, ಮೊದಲಾದ ಪ್ರದೇಶಗಳನ್ನು ಗೆದ್ದು ಕಪ್ಪಕಾಣಿಕೆಗಳನ್ನು ಪಡೆದುಕೊಳ್ಳುತ್ತಾನೆ. ಅನಂತರ ಅರಮನೆಗೆ ಬಂದು ಭಯವಿಲ್ಲದ ರಾಜ್ಯವಾಳುತ್ತಿದ್ದನು. ಆಗ ಇಜಪುರ (ವಿಜಾಪುರ) ಸೀಮೆಯ ಪಾಚ್ಚವನು ಎಂಬ ರಾಜ ಕೋಟೆರಾಯನ ದಿಗ್ವಿಜಯದ ಸಾಹಸದ ವಾರ್ತೆ ಕೇಳಿ ಅವನನ್ನು ಸದೆಬಡಿಯಬೇಕೆಂದು ಯುದ್ಧಕ್ಕೆ ಬರುತ್ತಾನೆ. ದೂತರ ಮೂಲಕ ಕೋಟೆರಾಯನಿಗೆ ಕಪ್ಪ ಕಾಣಿಕೆ ಸಲ್ಲಿಸುವಂತೆ ಇಲ್ಲವೇ ಯುದ್ಧಕ್ಕೆ ಬರುವೆನೆಂದು ದೂತನಲ್ಲಿ ಹೇಳುತ್ತಾನೆ ಕೋಟೆರಾಯ. ಘೋರ ಯುದ್ಧ ನಡೆಯುತ್ತದೆ. ಕೋಟೆರಾಯನ ಪರಾಕ್ರಮದೆದುರು ನಿಲ್ಲಲು ಸಾಧ್ಯವಾಗದೆ ಪಾಶ್ಚವನು ಓಡಿ ಹೋಗುತ್ತಾನೆ. ಕೋಟೆರಾಯ ಪಾಶ್ಚವನ್ನು ಸೋಲಿಸಿದ ನಂತರ, ತನ್ನ ರಾಜ್ಯವನ್ನು ಧರ್ಮದಿಂದ ಆಳುತ್ತಾ ಇದ್ದ. ಆಗ ಕೋಟೆರಾಯನನ್ನು ಸೋಲಿಸುವುದಕ್ಕಾಗಿ ಅಡ್ಡದಾರಿಯನ್ನು ಹಿಡಿಯುವ ಪಾಶ್ಚವನು ಬೀಸ್ಹಗ್ಗ ಹೊೈನೇಣ ತೆಗೆದುಕೊಂಡು, ಮೋಸದಿಂದ ಕಟ್ಟಿ ಹಿಡಿಯುತ್ತಾನೆ. ಆಗ ಕೋಟೆರಾಯ ಪಾಶ್ಚವನ ವಶನಾಗಲಾರೆನೆಂದು ಮಾಯವಾಗುತ್ತಾನೆ. ಘೋರ ದೈವಿಕತೆಯನ್ನು ಪಡೆದು ರಣಜಟ್ಟಿಗನ ಜೊತೆಗೂಡಿಕೊಂಡು ದಂಡಿನೊಂದಿಗೆ ಮುತ್ತಿಗೆ ಹಾಕುತ್ತಿದ್ದನು. ಆನೆ ಕುದುರೆಗಳನ್ನು ಹೊಡೆಯುತ್ತಿದ್ದನು. ಸೇನೆಯನ್ನು ಆನೆ ಕುದುರೆಗಳನ್ನು ಮಾಯ ಮಾಡುತ್ತಿದ್ದನು. ಇಜಪುರಕ್ಕೆ ತೊಂದರೆ ಕೊಡುತ್ತಿದ್ದನು. ಪ್ರಶ್ನೆ ಇಟ್ಟು ನೋಡುವಾಗ ಇದು ಕೋಟೆರಾಯನ ತಂಟೆಯೆಂದು ಕಂಡು ಬರಲು ಹೊನ್ನಪೀಠ ತಂದು ಕೋಟೆರಾಯನನ್ನು ಸ್ಥಾಪಿಸಿ, ಕಪ್ಪಕಾಣಿಕೆಯಿಟ್ಟು ಪೂಜಿಸುತ್ತಾನೆ ಪಾಶ್ಚವ. ಕೋಟೆತುರದವರ ಪೂಜೆ ಭೋಗ ಸಾಲದೆಂದೂ ಉತ್ತರದಲ್ಲಿ ಅನೇಕ ಸ್ಥಳಮನೆ ಕಟ್ಟಿಸಿಕೊಳ್ಳುತ್ತಾನೆ ಕೋಟೆರಾಯ. ಈ ಕೋಟೆರಾಯ ಮಂಡ್ಲಭೋಗಕ್ಕೆ ಬಂದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಮಂಚಿ ಯಲ್ಲಿ ಕೋಟೆದಾರ್ ಎಂಬ ದೈವತಕ್ಕೆ ಆರಾಧನೆ ಇದೆ .
  ಕೋಟೆರಾಯನ ಕಥಾನಕದಲ್ಲಿ ಇತಿಹಾಸದ ಎಳೆಗಳು ಅಡಗಿವೆ.ಇಲ್ಲಿ ವಿಜಾಪುರದ ಪಾಶ್ಚವ ಅರಸನ ದಾಳಿಯ ಪ್ರಸ್ತಾಪವಿದೆ 
ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಿದೆ 
ಅಧಾರ ಗ್ರಂಥಗಳು 
1 ವೈದ್ಯರ ಹಾಡುಗಳು ಸಂ-ಎ ವಿ ನಾವಡ
2 ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ :ಡಾ.ಲಕ್ಷ್ಮೀ ಜಿ ಪ್ರಸಾದ




Wednesday 11 November 2015

ತುಳುನಾಡಿನ ಭೂತಾರಾಧನೆ ಕಂಬಳದ ಉರವ ಮತ್ತು ಎರು ಬಂಟ ದೈವಗಳು (c)ಡಾ.ಲಕ್ಷ್ಮೀ ಜಿ ಪ್ರಸಾದ







http://kendasampige.com/images/trans.gif

http://kendasampige.com/images/trans.gif
ಹೌದು! ಹಬ್ಬದ ಅಮವಾಸ್ಯೆ ಬಂತೆಂದರೆ ತುಳುನಾಡು ರಂಗೇರುತ್ತದೆ.ಗದ್ದೆಗಳಲ್ಲಿ ಕಂಬಳ ಕೋರಿ ಆರಂಭವಾಗುತ್ತದೆ . ಮನೆ-ಮನಗಳಲ್ಲಿ ಭಕ್ತಿ-ಸಂಭ್ರಮಗಳು ತೊನೆದಾಡುತ್ತವೆ. ಪತ್ತನಾಜೆಯಂದು ತಮ್ಮ ತಮ್ಮ ಆವಾಸ ಸ್ಥಾನಕ್ಕೆ ಹೋಗುವ ಭೂತಗಳು ತಮ್ಮ ಗಗ್ಗರವನ್ನು ಬಿಚ್ಚಿ ವಿಶ್ರಮಿಸುತ್ತವೆ. ಮತ್ತೆ ಪುನಃ ಹಬ್ಬದಮವಾಸ್ಯೆಯಂದು ಗಗ್ಗರವನ್ನು ಕಟ್ಟಿ ನರ್ತಿಸುತ್ತವೆ. ಅಬ್ಬರದಿಂದ ಘರ್ಜಿಸಿ ತಪ್ಪು ಮಾಡಿದವನ ಎದೆಯಲ್ಲಿ ಭಯದ ಕಂಪನವನ್ನು ಉಂಟು ಮಾಡಿ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ. ನೊಂದವನಿಗೆ ನಿನ್ನ ಜೊತೆ ನಾನಿದ್ದೇನೆ. ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂದು ಭೂತಗಳು ಅಭಯವನ್ನು ಕೊಡುತ್ತವೆ.ದೆ. Copy rights reserved (c)Dr.Lakshmi G Prasad
ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ. ಇದೊಂದು ಧಾರ್ಮಿಕ ರಂಗಭೂಮಿ ಕೂಡ. ತುಳುನಾಡಿನ ಭೂತ ಕನ್ನಡದ ಭೂತವಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಶಕ್ತಿಗಳು. ತುಳುನಾಡಿನ ಜನರ ಆರಾಧ್ಯ ದೇವರುಗಳು ಇವರು. ಸಂಸ್ಕೃತದ `ಪೂತಂ' ಎಂದರೆ ಪವಿತ್ರವಾದದ್ದು ಎಂಬ ಪದವೇ ಮುಂದೆ ಬೂತೊ' ಆಗಿ ಭೂತ ಆಗಿರುವ ಸಾಧ್ಯತೆ ಇದೆ ಅಥವಾ ತುಳುನಾಡಿನ ಭೂತಗಳಲ್ಲಿ ಹೆಚ್ಚಿನವುಗಳು ಮೊದಲು ಮನುಷ್ಯರಾಗಿದ್ದು ನಂತರ ದೈವತ್ವಕ್ಕೇರಿ ಆರಾಧಿಸಲ್ಪಟ್ಟವರೇ ಆಗಿರುವುದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿ ಕೂಡ ಭೂತ ಪದ ಬಳಕೆಗೆ ಬಂದಿರಬಹುದು. ವಿಶಿಷ್ಟ ಆರಾಧನ ಪ್ರಕಾರವಾದ ಭೂತಾರಾಧನೆಯಿಂದಾಗಿ ತುಳುನಾಡು ವಿಶೇಷ ಗಮನ ಸೆಳೆಯುತ್ತದೆ. ಜೊತೆಗೆ ತುಳುನಾಡಿನ  ಕಂಬಳ ಕೂಡ ವಿಶೇಷ ಮಹತ್ವವನ್ನು ಪಡೆದಿದೆ.
ಹೌದು !    ಕಂಬಳ ಕೇವಲ    ಕೋಣಗಳ ಓಟವಲ್ಲ!... ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ. ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ . ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ.
 ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ.

ಹಬ್ಬದ ಅಮಾವಾಸ್ಯೆ ಕಳೆಯುತ್ತಲೇ ನನ್ನ ತಂದೆ ಮನೆ ಕೋಳ್ಯೂರು ವಾರಣಾಸಿಯ ಕಂಬಳ ಗದ್ದೆಯಲ್ಲಿ ಪೂಕರೆ ಕಂಬಳ ನೇಮ ಪ್ರತಿವರ್ಷ ನಡೆಯುತ್ತದೆ . ಆಗ .ನಮ್ಮ ಮನೆಯಲ್ಲಿ ನಾಗ ಬ್ರಹ್ಮ ದೈವದೊಂದಿಗೆ ಉರವ ಎಂಬ ದೈವಕ್ಕೂ ಆರಾಧನೆ ಇದೆ ಈ ಉರವ ಎಂಬ ಭೂತದ ಹೆಸರು ಕೂಡ ಈ  ತನಕ ವಿದ್ವಾಂಸರ ಭೂತಗಳ ಪಟ್ಟಿಯಲ್ಲಿ ದಾಖಲಾಗಿರಲಿಲ್ಲ!ದೆ. Copy rights reserved (c)Dr.Lakshmi G Prasad
ಗದ್ದೆಯನ್ನು ಉತ್ತು ಬಿತ್ತನೆಗೆ ಸಿದ್ಧ ಮಾಡುವುದನ್ನು ಕಂಡದ ಕೋರಿ (ಗದ್ದೆಯ ಕೋರಿ) ಎನ್ನುತ್ತಾರೆ. ಗದ್ದೆಯಲ್ಲಿ ಬಿತ್ತನೆ ಮಾಡುವ ಮೊದಲು ಪೂಕರೆ ಕಂಬ ನೆಡುವ ಸಂಪ್ರದಾಯ ಕಂಬಳ ಗದ್ದೆಗಳಲ್ಲಿ ಇರುತ್ತವೆ.ಇದನ್ನು ಗದ್ದೆಯ ಮದುವೆ ಎಂದು ಕರೆಯುತ್ತಾರೆ .ಗದ್ದೆ ಮದುಮಗಳು ಮತ್ತು ಪೂಕರೆ ಕಂಬವನ್ನು ಮದುಮಗ ಎಂದು ಭಾವಿಸುತ್ತಾರೆ . ಈ ಸಂದರ್ಭದಲ್ಲಿ ಉರವ, ಎರುಬಂಟ, ನಾಗಭೂತ ಹಾಗೂ ಬೆರ್ಮರ್ ಭೂತಗಳಿಗೆ ಕೋಲ ಕಟ್ಟಿ ನೇಮ ನಡೆಸುತ್ತಾರೆ. ಕಂಬಳ ಗದ್ದೆಗಳ ಅಧಿದೈವ ಬೆರ್ಮೆರ್. ಈತನ ನಾಗನೊಂದಿಗೆ ಸಮೀಕರಣಗೊಂಡು ನಾಗಬೆರ್ಮೆರ್ ಆಗಿದ್ದಾನೆ. ನಾಗಬೆರ್ಮೆರ್ ಎಂಬುದು ಸಂಸ್ಕೃತೀಕರಣಕ್ಕೆ ಒಳಗಾಗಿ ನಾಗಬ್ರಹ್ಮ ಭೂತವಾಗಿದೆ. ಉರವ ಮತ್ತು ಎರುಬಂಟರು ನಾಗಬೆರ್ಮೆರಿನ ಪರಿವಾರ ಭೂತಗಳಾಗಿವೆ.ಭೂತಕ್ಕೆ ನೇಮ ಕಟ್ಟುವ ಸಂದರ್ಭದಲ್ಲಿ ಭೂತನರ್ತಕರು ಮುಖಕ್ಕೆ ಬಣ್ಣ ಹಾಕಿಕೊಳ್ಳುವಾಗ ಆಯಾಯ ಭೂತಕ್ಕೆ ಸಂಬಂಧಿಸಿದ ಕಥಾನಕವನ್ನು ತೆಂಬರೆಯನ್ನು ಬಡಿಯುತ್ತಾ ಪಾಡ್ದನ ರೂಪದಲ್ಲಿ ಹಾಡುತ್ತಾರೆ. ಎಲ್ಲ ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳು ಈಗ ಲಭ್ಯವಿಲ್ಲ. ಹೆಚ್ಚಿನ ಪ್ರಧಾನ ಭೂತಗಳಿಗೆ ಪಾಡ್ದನಗಳನ್ನು ಹೇಳಿಯೇ ಭೂತ ಕಟ್ಟುತ್ತಾರೆ. ತುಂಡು ಭೂತಗಳು / ಪರಿವಾರ ದೈವಗಳು / ಅಧೀನ ಭೂತಗಳಿಗೆ ಪ್ರಧಾನ ಭೂತದ ವೇಷ ಭೂಷಣಗಳಲ್ಲಿ ತುಸು ವ್ಯತ್ಯಾಸ ಮಾಡಿ, ಹೆಸರು ಮಾತ್ರ ಹೇಳಿ ನೇಮ ಕೊಡುತ್ತಾರೆ. ಇಂದಿನ ವೇಗದ ಯುಗದಲ್ಲಿ ಅಪ್ರಧಾನ ದೈವಗಳ ಕುರಿತು ಮಾಹಿತಿ ಸಂಗ್ರಹಿಸುವುದು ಕಷ್ಟ ಸಾಧ್ಯವಾದ ವಿಚಾರವಾಗಿದೆ.
ಉರವ ಮತ್ತು ಎರುಬಂಟ ಭೂತಗಳ ನೇಮದಲ್ಲಿ ಈ ಭೂತಗಳಿಗೆ ಸಂಬಂಧಿಸಿದ ಪಾಡ್ದನವನ್ನು ಹೇಳುವುದಿಲ್ಲ. ಆದರೆ ಕಂಬಳ ಗದ್ದೆಗೆ ಸಂಬಂಧಿಸಿದ ಈಜೋ ಮಂಜೊಟ್ಟಿಗೋಣ ಎಂಬ ಹೆಸರಿನ ಪಾಡ್ದನವು ಪ್ರಚಲಿತವಿದೆ. ಈ ಪಾಡ್ದನವು ಡಾ| ಅಮೃತ ಸೋಮೇಶ್ವರರ ತುಳು ಪಾಡ್ದನ ಸಂಪುಟ, ಡಾ| ವಿವೇಕ ರೈ ಸಂಪಾದಿಸಿರುವ ಪುಟ್ಟು ಬಳಕೆಯ ಪಾಡ್ದನಗಳು, ಶ್ರೀಮತಿ ರೂಪಕಲಾ ಸಂಪಾದಿಸಿದ ನಾಟಿ ಹಾಗೂ ಡಾ| ಲಕ್ಷ್ಮೀ ಜಿ ಪ್ರಸಾದ್ (ಲೇಖಕಿ ) ಸಂಪಾದಿಸಿದ ಪಾಡ್ದನ ಸಂಪುಟದಲ್ಲಿದೆ.
ಈಜೋ ಮಂಜೊಟ್ಟಿಗೋಣ ಪಾಡ್ದನದ ಪ್ರಕಾರ ರೆಂಜಲಡಿ ಬರಿಕೆಯ ಮಂಜನಾಳ್ವರು ಕೋಣಗಳನ್ನು ಖರೀದಿಸಿ ತರಲು ಸುಬ್ರಹ್ಮಣ್ಯದ ಸಂತೆಗೆ ಹೋಗುತ್ತಾರೆ. ಜೊತೆಗೆ ಮೂಲದ ಕೆಲಸದ ಬಬ್ಬುವನ್ನು ಕರೆದೊಯ್ಯುತ್ತಾರೆ. ಹೋಗುವ ಮೊದಲು ತನ್ನ ಕುಲದೈವ ಬರಿದೈಯ ಧೂಮಾವತಿಯ ಮಂಡ್ಯಕ್ಕೆ ಹೋಗಿ ಒಳ್ಳೆಯ ಕೋಣಗಳು ಸಿಕ್ಕಿದರೆ ಒಂದು ತುತ್ತು ತಿಂದು ಎರಡನೆಯ ತುತ್ತು ತಿನ್ನುವುದರೊಳಗೆ ನೇಮಕ್ಕೆ ಗೊನೆ ಕಡಿದು ಇಡುತ್ತೇನೆ ಎಂದು ಹರಕೆ ಹೇಳುತ್ತಾರೆ. ಧೂಮಾವತಿ ದೈವದ ಅನುಗ್ರಹದಿಂದ ಮಂಜನಾಳ್ವರಿಗೆ ಒಳ್ಳೆಯ ಕೋಣಗಳು ಸಿಗುತ್ತವೆ. ಕೋಣಗಳೊಂದಿಗೆ ಹಿಂತಿರುಗಿ ಬರುವಾಗ ಧೂಮಾವತಿ ಭೂತದ ಮುಂಡ್ಯೆಯ ಬಳಿಗೆ ಬರುತ್ತಾರೆ. ಮುಂಡ್ಯೆಯ ಬಳಿಯಿದ್ದ ಹಲಸಿನ ಮರದ ಕಾಯಿಗಳನ್ನು ಕೀಳಲು ಮೂಲದ ಕೆಲಸದ ಬಬ್ಬುವಿಗೆ ಬಬ್ಬುವಿಗೆ ಮಂಜನಾಳ್ವರು ಹೇಳುತ್ತಾರೆ. ಹಲಸಿನ ಕಾಯಿ ಕೀಳುವಾಗ ಭೂತ ತನ್ನ ಕಾರಣಿಕವನ್ನು ತೊರಿಸುತ್ತದೆ ಎಂದು ಬಬ್ಬು ಹೇಳಿದಾಗ ಹಲಸಿನ ಹಣ್ಣನ್ನು ಕೀಳಲು ಹೇಳುತ್ತಾರೆ ಮಂಜನಾಳ್ವರು. ಅವರ ಅಣತಿಯಂತೆ ಮುಂಡ್ಯದ ಹಲಸಿನ ಮರದ ಹಣ್ಣನ್ನು ಕೀಳುತ್ತಾನೆ. ಬಬ್ಬು, ನಂತರ ಅಲ್ಲಿಯೇ ಹಣ್ಣನ್ನು ಕೊರೆದು ತಿಂದು ರೆಚ್ಚೆ(ಸಿಪ್ಪೆಯನ್ನು)ಯನ್ನು ಕೋಣಗಳಿಗೆ ಹಾಕುತ್ತಾರೆ. ತನಗೆ ಹೇಳಿದ ಹರಕೆಯನ್ನು ತೀರಿಸದೆ ಇರುವ ಮಂಜನಾಳ್ವರ ಮೇಲೆ ಧೂಮಾವತಿ ದೈವ ಮುನಿಯುತ್ತದೆ. ಇದರ ಪರಿಣಾಮವಾಗಿ ಕೋಣಗಳನ್ನು ಹಟ್ಟಿಯಲ್ಲಿ ಕಟ್ಟುವಷ್ಟರಲ್ಲಿ ಕಂಬಳಕ್ಕೆ ಬರಲು ಆಹ್ವಾನ ಬರುತ್ತದೆ ಮಂಜನಾಳ್ವರಿಗೆ. ಕಂಬಳಕ್ಕೆ ಹೋದ ಮಂಜನಾಳ್ವರ ಹಿಡಿತಕ್ಕೆ ಕೋಣಗಳು ಸಿಗುವುದಿಲ್ಲ. ಆಗ ಬಬ್ಬು ಹಠ ಮಾಡಿ ಮೂಲದವರು ಇಳಿಯಬಾರದ ಗದ್ದೆಗೆ ಇಳಿಯುತ್ತಾನೆ. ಆಗ ಮೂಲದ ಬಬ್ಬು ಮತ್ತು ಕೋಣಗಳು ಮಾಯಕವಾಗುತ್ತಾರೆ.ದೆ. Copy rights reserved (c)Dr.Lakshmi G Prasad
ತುಳುನಾಡಿನಲ್ಲಿ ದುರಂತವನ್ನಪ್ಪಿದವರು, ಮಾಯಕವಾದವರು ದೈವತ್ವಕ್ಕೇರಿ ಭೂತವಾಗಿ ಆರಾಧಿಸಲ್ಪಡುವುದು ಸಾಮಾನ್ಯವಾದ ವಿಚಾರವೇ ಆಗಿದೆ. ಅಂತೆಯೇ ಸತ್ಯದ ಕಂಬಳಗದ್ದೆಯಲ್ಲಿ ಮಾಯಕವಾದ ಮೂಲದ ಮಾಣಿ ಬಬ್ಬು ಮತ್ತು ಕೋಣ ದೈವಗಳಾಗಿದ್ದಾರೆಯೇ ? ಭೂತಗಳಾಗಿದ್ದರೆ ಯಾವ ಹೆಸರಿನಲ್ಲಿ ಆರಾಧಿಸಲ್ಪಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಪೂಕರೆ ಕಂಬಳ ನೇಮದ ಆಚರಣೆಯನ್ನು ವಿಮರ್ಶಿಸಿದಾಗ ಉತ್ತರ ಸಿಗುತ್ತದೆ. ಪೂಕರೆ ಕಂಬಳ ನೇಮದಲ್ಲಿ ಉರವ ಎಂಬ ದೈವವಿರುತ್ತದೆ. ಉರವನ ವೇಷ ಭೂಷಣಗಳು ಬಹಳ ಸರಳವಾಗಿರುತ್ತದೆ. ಅಣಿ, ಮುಡಿಗಳು ಇರುವುದಿಲ್ಲ. ಸೊಂಟಕ್ಕೆ ತೆಂಗಿನ ತಿರಿಯ ಅಲಂಕಾರ ಇರುತ್ತದೆ. ಮುಖಕ್ಕೆ ಕಪ್ಪು ಬಣ್ಣದಲ್ಲಿ ಬಿಳಿ ಚುಕ್ಕೆಗಳನ್ನು ಇಡುತ್ತಾರೆ. ಉರವ ದೈವವು ಯಜಮಾನನ ಕೋಣಗಳ ನೇಗಿಲಿನ ಹಗ್ಗವನ್ನು ಬಿಡಿಸುವ ಕಾರ್ಯವನ್ನು ಮಾಡುತ್ತದೆ. ಇದಕ್ಕೆ ಬಳ್ಳು ಗಿರುಪ್ಪುನೆ ಎನ್ನುತ್ತಾರೆ. ಇದು ಮೂಲದ ಉಳುಮೆ ಮಾಡುವ ಮಾಣಿಯ ಕೆಲಸವನ್ನು ಸೂಚಿಸುತ್ತದೆ. ಇದರಿಂದ ಮೂಲದ ಕೆಲಸಗಾರ ಬಬ್ಬು ದೈವತ್ವಕ್ಕೇರಿ ಉರವ ಎಂಬ ಹೆಸರಿನಿಂದ ಆರಾಧನೆ ಪಡೆಯುತ್ತಾನೆ ಎಂದು ತಿಳಿದು ಬರುತ್ತದೆ. ಕಂಬಳ ಕೋರಿಯ ದಿನದಂದು ಉರವ ಭೂತದೊಂದಿಗೆ ಎರು ಬಂಟ ಎಂಬ ಭೂತಕ್ಕೆ ಆರಾಧನೆ ಇರುತ್ತದೆ. ಉರವ ಎಂದರೆ ಉಳುಮೆಗಾರ ಎಂಬ ಅರ್ಥವಿದೆ .(ಉರ –plughing,ಉರವೆ-a person who  plouhgs,TULU-EGNLISH dictionary)ಎರು ಎಂದರೆ ಕೋಣ ಎಂದರ್ಥ. ಎರು ಬಂಟ ಭೂತಕ್ಕೆ ಎರಡು ಕೊಂಬುಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಉಳಿದಂತೆ ಉರವ ದೈವದಂತೆ ಈ ಭೂತದ ವೇಷ ಭೂಷಣಗಳು ಬಹಳ ಸರಳವಾಗಿರುತ್ತದೆ. ಕಂಬಳ ಗದ್ದೆಯಲ್ಲಿ ಮಾಯವಾದ ಕೋಣ ಬೊಳ್ಳನೇ ಎರುಬಂಟ ದೈವವಾಗಿ ಆರಾಧನೆ ಪಡೆಯುತ್ತದೆ. ಈಜೋ ಮಂಜೊಟ್ಟಿಗೋಣ ಪಾಡ್ದನದಲ್ಲಿ ಬರುವ ಒಂಜಾಳ ಆತೇನೇ ಬಬ್ಬು, {ಒಂದಾಳು (ದೈವ) ಆದನೇ ಬಬ್ಬು}, ಎರುತ್ತ ಒಸಯೆ ಪಂಡೆನೇ {ಕೋಣನ ಒಸಯ (ಭೂತಾರಾಧನೆಯ ಆರಂಭದಲ್ಲಿ ಹೇಳುವ ಸಂಧಿ) ಹೇಳಿದನು} ಎಂಬ ಸಾಲುಗಳಲ್ಲಿ ಮೂಲದ ಮಾಣಿ ಹಾಗೂ ಕೋಣ ದೈವಗಳಾದ ಬಗ್ಗೆ ಸೂಚನೆ ಸಿಗುತ್ತದೆ.ದೆ. Copy rights reserved (c)Dr.Lakshmi G Prasad
ಕಾಸರಗೋಡು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯದ ಸುತ್ತಮುತ್ತಲಿನ ಪರಿಸರದಲ್ಲಿ ಉರವ ಹಾಗೂ ಎರುಬಂಟ ದೈವಗಳಿಗೆ ಗದ್ದೆಯಲ್ಲಿ ಕೋರಿಯಂದು ಆರಾಧನೆ ನಡೆಯುತ್ತದೆ. ಕಾಸರಗೋಡು ಜಿಲ್ಲೆಯ ಕೋಳ್ಯೂರು ಹಾಗೂ ಬಂಟ್ವಾಳದ ಬೀರೂರು ಕಂಬಳ ಗದ್ದೆಗಳಲ್ಲಿ ಮಾಯವಾದ ಕೋಣ ಹಾಗೂ ಮೂಲದ ಮಾಣಿಗಳ ಪ್ರತೀಕವಾಗಿ ಎರಡು ಕಲ್ಲುಗಳಿವೆ. ಕೋಳ್ಯೂರು ಕಂಬಳ ಗದ್ದೆಯಲ್ಲಿ ಎರಡು ಕೋಣಗಳು ಮಲಗಿರುವಂತೆ ಕಾಣಿಸುವ ಕಲ್ಲುಗಳಿದ್ದು ಇದನ್ನು ಎರು ಮಾಜಿನ ಕಲ್ಲು (ಕೋಣ ಮಾಯವಾದ ಕಲ್ಲು) ಎಂದು ಕರೆಯುತ್ತಾರೆ. ತುಸು ದೂರದಲ್ಲಿ ಒಂದು ಎತ್ತರ ದಿಣ್ಣೆಯ ಮೇಲೆ ಸಣ್ಣ ಕಲ್ಲೊಂದಿದ್ದು ಇದನ್ನು ಮುಟ್ಟಾಳೆ ಕಲ್ಲು ಎನ್ನುತ್ತಾರೆ. ಇದು ಮೂಲದ ಮಾಣಿಯ ಮುಟ್ಟಾಳೆ ಬಿದ್ದ ಕಲ್ಲು ಎನ್ನುತ್ತಾರೆ. ಅಲ್ಲಿಯೇ ಸಮೀಪದ ತೋಡಿನಲ್ಲಿ ಮೂಲದ ಮಾಣಿ ಹಾರಿ ಮಾಯವಾದ ಎಂದು ಭಾವಿಸಲಾದ ನೀರಿನ ಗುಂಡಿ ಇದೆ. ಇದನ್ನು ರೆಂಜೆ ಗುಂಡಿ ಎನ್ನುತ್ತಾರೆ. ರೆಂಜಲಾಡಿ ಬರಿಕೆಯವನು ಹಾರಿ ಮಾಯವಾದ ಗುಂಡಿ ಎಂಬುದೇ ಕಾಲಾಂತರದಲ್ಲಿ ರೆಂಜೆಗುಂಡಿ ಎಂದಾಗಿದೆ ಎಂದು ಅಲ್ಲಿನ ಹಿರಿಯರಾದ ವಾರಣಾಸಿ ನಾರಾಯಣ ಭಟ್ಟರು ಹೇಳುತ್ತಾರೆ.
ಹೀಗೆ ಈಜೋ ಮಂಜೊಟ್ಟಿಗೋಣ ಪಾಡ್ದನ ಕಂಬಳದಲ್ಲಿ ನಡೆಯುವ ಉರವ ಎರು ಬಂಟರ ನೇಮ ಹಾಗೂ ಕಂಬಳಗಳ ಕುರಿತು ಪ್ರಚಲಿತವಿರುವ ಐತಿಹ್ಯಗಳನ್ನುಒಟ್ಟಿಗೆ ಕಲೆ ಹಾಕಿ ವಿಮರ್ಶಿಸಿದಾಗ ಕಂಬಳದಲ್ಲಿ ಮಾಯವಾದ ಮೂಲದ ಮಾಣಿ ಹಾಗೂ ಕೋಣವೇ ಮುಂದೆ ದೈವತ್ವಕ್ಕೇರಿ ಉರವ ಮತ್ತು ಎರುಬಂಟರಾಗಿ ಆರಾಧಿಸಲ್ಪಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ.ದೆ. Copy rights reserved (c)Dr.Lakshmi G Prasad

ವಾಸ್ತವವಾಗಿ ಆಲೋಚಿಸುವುದಾದರೆ ಇದು ಒಂದು ಸಂಘರ್ಷ ದ ಕಥಾನಕ .ಮೂಲದವರು ಇಳಿಯಬಾರದ ಗದ್ದೆಗೆ ಹಠ ಮಾಡಿ ಮೂಲದ ಹುಡುಗ ಬಬ್ಬು ಇಳಿಯುತ್ತಾನೆ .ತಾನು ಸಾಕಿದ ಕೋಣಗಳನ್ನೂ ಓಡಿಸುತ್ತಾನೆ .ಬಹುಶ ಅಲ್ಲಿ ಸಂಘರ್ಷ ನಡೆದು ಮೂಲದ ಉಳುಮೆಯ ಹುಡುಗ ಬಬ್ಬು ಮತ್ತು ಕೋಣಗಳು ದುರಂತಕ್ಕೀಡಾ ಗಿರುವ ಸಾಧ್ಯತೆ ಇದೆ .ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಅಲ್ಲಲ್ಲಿ ಕಂಡು ಬರುವ ವಿಚಾರ ಅಂತೆಯೇ ಇವರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ . ಈ ಘಟನೆ ಕೋಳ್ಯೂರು ಕಂಬಳ ಗದ್ದೆ ಅಥವಾ ಸುತ್ತು ಮುತ್ತಲಿನ 10-15  ಕಿಲೋ ಮೀಟರ್ ವ್ಯಾಪ್ತಿಯ ಒಳಗಡೆ ಎಲ್ಲೋ ನಡೆದಿರಬೇಕು ದೆ. Copy rights reserved (c)Dr.Lakshmi G Prasad
ಕೃಷಿ ಪ್ರಧಾನ ತುಳುನಾಡಿನಲ್ಲಿ ಭೂತಾರಾಧನೆಯು ಹಬ್ಬದಮವಾಸ್ಯೆಯಂದು ಕಂಬಳ ಕೋರಿ ನೇಮದ ಮೂಲಕ ಆರಂಭಗೊಳ್ಳುತ್ತದೆ. ಮೊದಲಿಗೆ ಕಂಬಳ ಗದ್ದೆಯ ಅಧಿದೈವಗಳಾದ ಉರವ, ಎರುಬಂಟ ಹಾಗೂ ಭೂಮಿಯ ಒಡೆಯನೆಂದೇ ಭಾವಿಸಲ್ಪಟ್ಟಿರುವ ನಾಗಬೆರ್ಮೆರ್ ಭೂತಗಳ ಆರಾಧನೆಯನ್ನು ಮಾಡುತ್ತಾರೆ. ಈ ಭೂತಗಳ ಆರಾಧನೆಯ ನಂತರ ಕುಟುಂಬದ ಭೂತಗಳಿಗೆ ಗ್ರಾಮದ ಭೂತಗಳಿಗೆ ಆರಾಧನೆ ಸಲ್ಲಿಸುತ್ತಾರೆ.
ದೆ. Copy rights reserved (c)Dr.Lakshmi G Prasad


ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರೀ ಪದವಿ ಪೂರ್ವ ಕಾಲೇಜು
ಬೆಳ್ಳಾರೆ ,ಸುಳ್ಯ
ಫೋನ್ :೯೪೮೦೫೧೬೬೮೪
E mail :samagramahithi@gmail.com
ಬ್ಲಾಗ್ :http://laxmipras.blogspot.com